ಬೆಂಗಳೂರು: ಸವದತ್ತಿಯಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ನೀರಾವರಿ ನಿಗಮದ (ಕೆಎನ್ಎನ್) ವಿದ್ಯುತ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಲಿಂಗಪ್ಪ ಬಸಪ್ಪ ಹಡಗಲಿ ಅವರು ವಿವಿಧ ಕಡೆ 8 ನಿವೇಶನ ಹಾಗೂ 2 ಮನೆಗಳನ್ನು ಹೊಂದಿರುವುದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿ ವೇಳೆ ಪತ್ತೆಯಾಗಿದೆ.
ಶಿವಲಿಂಗಪ್ಪ ತಮ್ಮ ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಎಸಿಬಿ ಪೊಲೀಸರು ಅವರ ಮನೆ ಹಾಗೂ ಕಚೇರಿ ಮೇಲೆ ಈ ದಾಳಿ ನಡೆಸಿದ್ದಾರೆ.
ಬಾಗಲಕೋಟೆ ನವನಗರದಲ್ಲಿ ಒಂದು ಮನೆ, ಒಂದು ನಿವೇಶನ, ಯರಗಟ್ಟಿ ಗ್ರಾಮದಲ್ಲಿ ಒಂದು ಮನೆ, ನಾಲ್ಕು ನಿವೇಶನ, ಮುತಗಾ, ಬೈಲಹೊಂಗಲ ಹಾಗೂ ಬಸವನ ಕುಡಚಿ ಗ್ರಾಮದಲ್ಲಿ ಒಂದು ನಿವೇಶನ, ಸವದತ್ತಿಯ ವಿವಿಧ ಸರ್ವೆ ನಂಬರ್ಗಳಲ್ಲಿ 38 ಎಕರೆ ಜಮೀನು ಹೊಂದಿದ್ದಾರೆ.
ಅಲ್ಲದೆ, ಒಂದು ಮಹೀಂದ್ರಾ ಟಿಯುವಿ ಜೀಪು, ಎರಡು ದ್ವಿಚಕ್ರ ವಾಹನ, 275 ಗ್ರಾಂ ಚಿನ್ನ, 832 ಗ್ರಾಂ ಬೆಳ್ಳಿ, ಮನೆಯಲ್ಲಿ ₹55,000 ನಗದು, ಬ್ಯಾಂಕಿನಲ್ಲಿ ₹ 40 ಲಕ್ಷ ಠೇವಣಿ ಇಟ್ಟಿದ್ದಾರೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.