ಹೊಸಪೇಟೆ: ಕುರುಬರೆಂದು ಹೇಳಿಕೊಂಡ ಕೆಲ ಯುವಕರು ವಾಲ್ಮೀಕಿ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೊ ತುಣುಕೊಂದು ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ್ದು, ಸಮುದಾಯದ ನೂರಾರು ಜನರು ನಗರದ ವಾಲ್ಮೀಕಿ ವೃತ್ತದಲ್ಲಿ ಜಮಾಯಿಸಿ ಟೈರ್ಗಳನ್ನು ಸುಟ್ಟು ಪ್ರತಿಭಟಿಸಿದರು.
ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲ್ಲೂಕುವಾಲ್ಮೀಕಿ ನಾಯಕ ಸಂಘದ ಕಾರ್ಯಕರ್ತರು ಧರಣಿ ನಡೆಸಿದರು.
'ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆಯನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ, ಕ್ರಮ ಕೈಗೊಳ್ಳಬೇಕು' ಎಂದು ಸಂಘದ ಅಧ್ಯಕ್ಷ ಶಿವರಾಮ ಗುಜ್ಜಲ ಒತ್ತಾಯಿಸಿದರು.ಡಿವೈಎಸ್ಪಿ ಎ.ವಿ. ನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
ಚುನಾವಣೆ ಹಿನ್ನೆಲೆ: ಲೋಕಸಭೆ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವಿನ ವಾಗ್ವಾದಗಳನ್ನು ಹಿನ್ನೆಲೆಯಾಗಿಟ್ಟುಕೊಂಡೇ ಈ ಯುವಕರು ವಾಲ್ಮೀಕಿ ಸಮುದಾಯದ ಕುರಿತು ಮಾತನಾಡಿದ್ದಾರೆ.
‘ನೀವು ಕುರುಬರನ್ನು ಬೈತೀರಿ. ನಿಮಗೆ ದಮ್ಮಿದ್ದರೆ ಬಂದ್ ಬಿಡ್ರಲೇ, ಕೊಪ್ಪಳ ದಂಡ್ಯಾಗ ಕುರಿ ಮೇಯಿಸ್ತಿದ್ದೀನಿ’ ಎಂದು ಒಬ್ಬ ಯುವಕ ಹೇಳಿದ್ದಾನೆ.
‘ರಾಯಣ್ಣನ ಗ್ರೂಪಿಗೆ ಬಾ ಕುರುಬರೇನೆಂದು ತೋರಿಸ್ತೀನಿ. ನನ್ನ ಅಡ್ರೆಸ್ ರಾಣಿಬೆನ್ನೂರು ಹತ್ರ ತಾಂಡಾ’ ಎಂದು ಮತ್ತೊಬ್ಬ ಯುವಕ ಹೇಳಿದ್ದಾನೆ.