ಮೃತರು ಬಾಗಲಕೋಟೆ ಜಿಲ್ಲೆಯವರು. ಟಂಟಂನಲ್ಲಿದ್ದ ಏಳು ಜನರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕೊಲ್ಹಾರದಲ್ಲಿ ವಾರದ ಸಂತೆ ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮೃತರ ಕಡೆಯ ಉದ್ರಿಕ್ತರು ಕೊಲ್ಹಾರ ಸಬ್ ಇನ್ಸ್ಪೆಕ್ಟರ್ ಅನಿಲ ಕುಂಬಾರ ಅವರನ್ನು ಜಗ್ಗಾಡಿ, ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು. ನಂತರ ಅವರ ವಾಹನವನ್ನು ಸುಟ್ಟು ಹಾಕಿದರು. ಇದಾದ ಬಳಿಕ ನಾಲ್ಕು ಪೊಲೀಸ್ ವಾಹನ, ಸಾರಿಗೆ ಬಸ್ ಹಾಗೂ ಖಾಸಗಿ ಕಾರಿನ ಗಾಜುಗಳನ್ನು ಜಖಂಗೊಳಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.