ಬಾದಾಮಿ: ಸಮೀಪದ ಬನಶಂಕರಿ ದೇವಾಲಯದ ದಕ್ಷಿಣ ದಿಕ್ಕಿನಲ್ಲಿರುವ ಶಿಲಾ ಮಂಟಪಕ್ಕೆ ಮಂಗಳವಾರ ಬೆಳಗಿನ ಜಾವ 18 ಚಕ್ರಗಳ ಲಾರಿ ಡಿಕ್ಕಿ ಹೊಡೆದಿದ್ದು, ಮುಂದಿನ ಸಾಲಿನ ಕಂಬವು ಸರಿದಿದೆ. ಮಂಟಪದ ಇತರ ಕಂಬಗಳೂ ಸಡಿಲಗೊಂಡಿವೆ.
ಲಾರಿ ಜರುಗಿಸಿದರೆ ಶಿಲಾಮಂಟಪ ಕುಸಿಯುವ ಆತಂಕವೂ ಇದೆ ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿದೆ.ಸದ್ಯ ಈ ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದ್ದು, ಹರಿದ್ರಾತೀರ್ಥ ಹೊಂಡದ ಪಕ್ಕದ ರಸ್ತೆಯನ್ನು ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಎರಡು ದಶಕಗಳ ಹಿಂದೆಯೂ ಶಿಲಾ ಮಂಟಪಕ್ಕೆ ವಾಹನ ಡಿಕ್ಕಿ ಹೊಡೆದಿತ್ತು. ಆಗ ಜಖಂ ಆಗಿದ್ದ ಮಂಟಪವನ್ನು ಭಾರತೀಯ ಪುರಾತತ್ವ ಇಲಾಖೆಯು ದುರಸ್ತಿ ಮಾಡಿ, ಈ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿತ್ತು.
ಧಾರವಾಡದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್ ಬಂದ ಬಳಿಕ ಲಾರಿಯನ್ನು ತೆಗೆಯುವ ನಿರ್ಧಾರ ಮಾಡಲಾಗುವುದು ಎಂದು ಇಲ್ಲಿಯ ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಅಜಯ ಜನಾರ್ಧನ ಹಾಗೂ ಪ್ರಶಾಂತ ಕುಲಕರ್ಣಿ ಅವರು ತಿಳಿಸಿದ್ದಾರೆ.