ಕಗ್ಗೋಡ (ವಿಜಯಪುರ): ‘ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ರೂಪಿಸಿದ್ದ ‘ಲಕ್ಪತಿ ಖೇತಿ’ ಕೃಷಿ ತಾಕಿನ ಮಾದರಿ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವ ಉದ್ದೇಶ ಇದ್ದು, ಈ ಸಂಬಂಧ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ಕೊಲ್ಹಾಪುರದ ಕನ್ಹೇರಿ ಮಠದ ಅದೃಶಕಾಡಸಿದ್ಧೇಶ್ವರ ಸ್ವಾಮೀಜಿ ಆಶಯದಂತೆ ಉತ್ಸವಕ್ಕಾಗಿ ಕಗ್ಗೋಡದಲ್ಲಿ ರೂಪಿಸಿದ್ದ ಕೃಷಿ ತಾಕು ವೀಕ್ಷಿಸಿದ ಸಚಿವರು, ‘ಇದೊಂದು ರೈತ ಪರ ಯೋಜನೆ. ಹೀಗಾಗಿ ಬಜೆಟ್ನಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.
ಏನಿದು ಲಕ್ಪತಿ ಖೇತಿ?: ಒಂದು ಎಕರೆ ಕೃಷಿ ಭೂಮಿ. ಇದರೊಳಗೆ ರೈತನ ಮನೆ. ಮಗ್ಗುಲಲ್ಲೇ ಗೋಶಾಲೆ. ಶೌಚಾಲಯ. ಇದರ ಪಕ್ಕದಲ್ಲೇ ಜೈವಿಕ ಗೊಬ್ಬರಗಳ ಉತ್ಪಾದನಾ ಘಟಕ, ಕೋಳಿ–ಆಡು ಸಾಕಣೆ ಘಟಕ, ಗೋಬರ್ ಗ್ಯಾಸ್ ಘಟಕವೂ ಇಲ್ಲಿದೆ. ಎರೆತೊಟ್ಟಿ, ಅಜೋಲಾ ತೊಟ್ಟಿಯೂ ಇದೆ. ಇದಕ್ಕಾಗಿ ಮೂರು ಗುಂಟೆ ಭೂಮಿ ಬಳಸಿಕೊಂಡಿದ್ದಾರೆ.
ಉಳಿದ 37 ಗುಂಟೆ ಜಮೀನಿನಲ್ಲಿ 110ಕ್ಕೂ ಹೆಚ್ಚು ಬೆಳೆಗಳಿವೆ. ಆಹಾರ ಧಾನ್ಯ, ವಾಣಿಜ್ಯ, ಮೇವು, ಆಯುರ್ವೇದ, ಅರಣ್ಯ ಕೃಷಿ, ತೋಟಗಾರಿಕೆ, ಗ್ರೀನ್ ಹೌಸ್, ದೇಸಿ ಬೀಜ ಬ್ಯಾಂಕ್, ತರಹೇವಾರಿ ತರಕಾರಿ, ಸೊಪ್ಪು, ಗಡ್ಡೆ, ಫಲ ವರ್ಗ, ಹಣ್ಣಿನ ಬೆಳೆಗಳು ಇದರೊಳಗೆ ಅಡಕಗೊಂಡಿವೆ.
ಶೀಘ್ರ ಹಿಂಗಾರು ಬೆಳೆ ಹಾನಿ ಸಮೀಕ್ಷೆ: ತಿಕೋಟಾ (ವಿಜಯಪುರ) ವರದಿ: ಹಿಂಗಾರು ಬೆಳೆ ಹಾನಿ ಸಮೀಕ್ಷೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಬುಧವಾರ ಇಲ್ಲಿ ತಿಳಿಸಿದರು.