ಬೆಂಗಳೂರು:ಲಂಡನ್ನಲ್ಲಿ ಸಿಲುಕಿರುವ 326ಕನ್ನಡಿಗರನ್ನು ಹೊತ್ತ ಮೊದಲ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಮುಂಜಾನೆ ಬಂದಿಳಿದಿದೆ.
ಈ ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಅನಾರೋಗ್ಯ ಕಾರಣದಿಂದ ತುರ್ತಾಗಿ ತಾಯ್ನಾಡಿಗೆ ಮರಳುವವರಾಗಿದ್ದರು. ಅಂಥವರ ಪ್ರಯಾಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ ಗೆ ತಿಳಿಸಿದ್ದವು.
ಲಂಡನ್ ನಿಂದ ಸೋಮವಾರ ಬೆಂಗಳೂರಿಗೆ ಬಂದ 326ಪ್ರಯಾಣಿಕರ ಪೈಕಿ, ಯಾರಿಗೂ ಕೊರೊನಾ ಸೋಂಕು ತಗುಲಿರುವ ಲಕ್ಷಣಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.
'ಮೂರು ತಿಂಗಳ ಗರ್ಭಿಣಿಯಾಗಿದ್ದ 27 ವರ್ಷದ ಮಹಿಳೆಯೊಬ್ಬರಿಗೆ ಗರ್ಭಪಾತವಾಗಿದೆ. ಅವರನ್ನು ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಮಹಿಳೆ ಮತ್ತು ಅವರ ಪತಿಯನ್ನು ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಡಾ. ಪ್ರಭುದೇವ ಗೌಡ ತಿಳಿಸಿದರು.
'ಆಸ್ಪತ್ರೆಯಲ್ಲಿ ಇಬ್ಬರನ್ನೂ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿದೆ' ಎಂದು ಹೇಳಿದರು.ಎರಡನೇ ವಿಮಾನ ಮೇ 12ರಂದು ಮಂಗಳೂರಿಗೆ ಬರಲಿದೆ.