ಬೆಂಗಳೂರು: ಶ್ರುತಿ– ಅರ್ಜುನ್ ಸರ್ಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಜಾ ಯಾವುದೇ ಸಾಕ್ಷ್ಯಗಳನ್ನೂ ಕೊಟ್ಟಿಲ್ಲ...
– ಇದು ಹಿರಿಯ ನಟ ಅಂಬರೀಷ್ ಅವರ ಮಾತು. ಶ್ರುತಿ ಹರಿಹರನ್ ಅವರು ಮೀ ಟೂ ಅಭಿಯಾನದ ಅಡಿ ನಟ ಅರ್ಜುನ್ ಅರ್ಜಾ ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೇಲಿನಂತೆ ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯ ಝಲಕ್ ಹೀಗಿದೆ:
‘ಪ್ರಕರಣದಲ್ಲಿ ದೊಡ್ಡ ನಟರ ಕೈವಾಡವಿರುವುದು ನನಗೆ ಗೊತ್ತಿಲ್ಲ. ಸಿನಿಮಾ ಸೆಟ್ನಲ್ಲಿ ನಟ ನಟಿ ಹೇಗಿರಬೇಕು, ಏನು ಮಾಡಬೇಕು, ಮಾಡಬಾರದು ಎಂಬುದನ್ನು ನಿರ್ದೇಶಕ ಹೇಳಬೇಕು. ಅದನ್ನೆಲ್ಲಾ ನಾವು ಹೇಳಲಾಗುವುದಿಲ್ಲ. ಪ್ರೀತಿ, ಪ್ರಣಯ ಸನ್ನಿವೇಶಗಳಲ್ಲಿ ಒಬ್ಬರನ್ನೊಬ್ಬರೂ ದೂರವಿಟ್ಟು ತೋರಿಸಲಾಗುತ್ತದೆಯೇ?
ಇಂಥ ಪ್ರಕರಣಗಳಿಗೆ ಸಂಬಂಧಿಸಿ ಆಂತರಿಕ ದೂರು ಸಮಿತಿಯನ್ನು ನಾವೇಕೆ ರೂಪಿಸಬೇಕು? ಮಹಿಳೆಯರೇ ರೂಪಿಸಲಿ. ನಾವೇನು ಬೇಡ ಅಂದಿದ್ದೇವೆಯೇ? ಆದರೆ, ಇತ್ತೀಚೆಗೆ ಆ ಸಮಿತಿ ರಚನೆ ಪ್ರಕ್ರಿಯೆ ಜಾರಿಯಲ್ಲಿದೆ. ಯಾವಾಗ ಅಸ್ತಿತ್ವಕ್ಕೆ ಬರುತ್ತದೆ ಎಂದು ಸಮಯ, ಮುಹೂರ್ತ ಹೇಳುತ್ತೇನೆ.
‘ಫೈರ್’ ಸಂಘಟನೆಯನ್ನು ಮಹಿಳೆಯರೇ ಮಾಡಿದರು. ಅದರ ನೇತೃತ್ವ ವಹಿಸಿದ್ದ ಪ್ರಿಯಾಂಕಾ ಉಪೇಂದ್ರ ಅವರೇ ಹೊರಬಂದಿದ್ದಾರೆ. ಹಾಗಿದ್ದರೆ ಅಲ್ಲೇನೋ ಲೋಪ ಇದೆ ಎಂದು ಅರ್ಥ ತಾನೆ?
ಇಬ್ಬರಿಗೂ ನನ್ನ ಸಲಹೆ ಒಂದೇ. ‘ಇಬ್ಬರೂ ಪರಸ್ಪರ ಕೈಕುಲುಕಿಕೊಂಡು ವಿಶ್ವಾಸದಿಂದ ಹೋಗಿ...’ ಆದರೆ ಆ ಹಂತ ಮೀರಿದೆ’ ಎಂದು ಅಂಬರೀಷ್ ಹೇಳಿದರು.