ಬೆಂಗಳೂರು: ಅಂಬರೀಷ್ ಅವರ ಅಂತ್ಯಕ್ರಿಯೆ ವೀಕ್ಷಿಸಲು ಬಂದಿರುವ ಸಾವಿರಾರು ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಂಠೀರವ ಸ್ಟುಡಿಯೊದ ಆಡಳಿತ ಕಚೇರಿಯ ಮುಂಭಾಗದಿಂದ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಗಣ್ಯರು, ನಟ, ನಟಿಯರು ತೆರಳಲು ಅವಕಾಶ ಕಲ್ಪಿಸಲಾಗಿದೆ. ಈ ಮಾರ್ಗದಲ್ಲಿಯೇ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗವಾಗಿ ಚಿತ್ರರಂಗದ ನಟ, ನಟಿಯರು ತೆರಳುವಾಗ ಅಭಿಮಾನಿಗಳು ಜೈಕಾರ ಮೊಳಗಿಸುತ್ತಿದ್ದಾರೆ.
ನಟರಾದ ಶಿವರಾಜ್ ಕುಮಾರ್, ದುನಿಯಾ ವಿಜಯ್, ರಂಗಾಯಣ ರಘು, ಜೈಜಗದೀಶ್, ಚೇತನ್, ನಿರ್ದೇಶಕ ಎಸ್.ನಾರಾಯಣ್ ಸೇರಿದಂತೆ ಹಲವು ಕಲಾವಿದರು ಈಗಾಗಲೇ ಬಂದಿದ್ದಾರೆ.