ನವದೆಹಲಿ: ‘ದೇಶದ ಭದ್ರತೆ ಮತ್ತು ಜನರ ಅಭಿವೃದ್ಧಿಗೆ ಒತ್ತು ನೀಡುವುದೇ ಮೋದಿ ಸರ್ಕಾರದ ಆದ್ಯತೆಗಳಾಗಿವೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಶಾ, ‘ಮೋದಿ ನಾಯಕತ್ವದ ಸರ್ಕಾರದ ಆದ್ಯತೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಾನು ಒತ್ತು ನೀಡುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು, ಅತಿ ಸೂಕ್ಷ್ಮ ಎನ್ನಲಾದ ಗೃಹ ಸಚಿವಾಲಯದ ಹೊಣೆ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.
ಅಧಿಕಾರ ಸ್ವೀಕಾರ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಶನಿವಾರ ಕೇಂದ್ರದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಗೃಹ ಖಾತೆ ರಾಜ್ಯ ಸಚಿವರಾದ ಜಿ.ಕೆ. ರೆಡ್ಡಿ ಮತ್ತು ನಿತ್ಯಾನಂದ ರೈ ಅವರೂ ಅಧಿಕಾರ ವಹಿಸಿಕೊಂಡರು.
ಪ್ರಸಕ್ತ ರಾಷ್ಟ್ರಪತಿ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಸರಿಪಡಿಸುವುದು ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯ (ಎನ್ಆರ್ಸಿ) ಅಂತಿಮ ವರದಿ ಪ್ರಕಟವಾದ ಬಳಿಕ ಅಸ್ಸಾಂನಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿ ನಿಭಾಯಿಸುವುದು ನೂತನ ಗೃಹ ಸಚಿವರ ಮುಂದಿರುವ ಸವಾಲಾಗಿದೆ.
ಭಯೋತ್ಪಾದನೆ ಮತ್ತು ಅಕ್ರಮ ಒಳನುಸುಳುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಎನ್ಡಿಎ ಸರ್ಕಾರದ ನೀತಿಗೆ ಅಂತಿಮ ರೂಪ ನೀಡಲು ಶಾ ಆದ್ಯತೆ ನೀಡುವ ಸಂಭವವಿದೆ ಎಂದು ಗೃಹ ಸಚಿವಾಲಯದ ಆಧಿಕಾರಿಯೊಬ್ಬರು ಹೇಳಿದ್ದಾರೆ.