ಬೆಂಗಳೂರು: ‘ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ, ಸಕ್ರಮ ಮಾಡಿಕೊಳ್ಳಲು ಬಗರ್ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸುವುದಕ್ಕೆಮತ್ತೊಂದು ಅವಕಾಶ ನೀಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಅಕ್ರಮ ಭೂಮಿಯನ್ನು ಸಕ್ರಮ ಮಾಡಿಕೊಳ್ಳಲು ಭೂ ಸುಧಾರಣಾ ಕಾಯ್ದೆಯಡಿ ಈ ಹಿಂದೆ ಅರ್ಜಿ ಸಲ್ಲಿಸಿದ್ದ ಹಲವು ರೈತರ ಅರ್ಜಿಗಳು ತಿರಸ್ಕೃತಗೊಂಡಿವೆ. ಮತ್ತೆ ಅವಕಾಶ ನೀಡುವುದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ’ ಎಂದರು.
‘ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಫಾರಂ ನಂ. 50, 53ರಡಿ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ. ಅವಧಿ ವಿಸ್ತರಣೆಗೆ ರೈತರಿಂದ ಮನವಿ ಬಂದಿದೆ. ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.
‘ಲಾಕ್ಡೌನ್ ಸಡಿಲಿಸಿದ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಕೆಲವು ಕಡೆ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುತ್ತಿಲ್ಲ ಎಂಬ ದೂರು ಬಂದಿದೆ. ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಸೂಚನೆ ನೀಡಲಾಗಿದೆ’ ಎಂದರು.
‘ತಮ್ಮ ರಾಜ್ಯಗಳಿಗೆ ಹೋಗುವುದು ಬೇಡ, ಇಲ್ಲಿಯೇ ಕೆಲಸ ಸಿಗಲಿದೆ ಎಂದು ಭರವಸೆ ನೀಡಿದ್ದರಿಂದ ಬಿಹಾರದ ಕಾರ್ಮಿಕರು ತಮ್ಮ ಪ್ರದೇಶಗಳಿಗೆ ಮರಳಿ ಬರಲು ಒಪ್ಪಿದ್ದಾರೆ’ ಎಂದೂ ಅವರು ತಿಳಿಸಿದರು.
‘ವಿದೇಶಗಳಿಂದ ರಾಜ್ಯಕ್ಕೆ ಬರುವ ಕನ್ನಡಿಗರಿಗೆ ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡಲು ಶಾಸಕರು ಮನವಿ ಮಾಡಿದ್ದಾರೆ. ಅದೇ ರೀತಿ ಕ್ವಾರಂಟೈನ್ ಮಾಡಲಾಗುವುದು’ ಎಂದೂ ಅಶೋಕ ತಿಳಿಸಿದರು.
‘ರಾಜ್ಯದಲ್ಲಿ ಜಮೀನು ಹಾಗೂ ನಿವೇಶನ ನೊಂದಣಿ ಆರಂಭವಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆದಾಯ ಸಂಗ್ರಹ ಹೆಚ್ಚಳಗೊಂಡಿದೆ. ಮೊದಲ ದಿನ ₹ 6 ಲಕ್ಷ ಆದಾಯ ಸಂಗ್ರಹ ಆಗಿತ್ತು. ಸೋಮವಾರ (ಮೇ 4) ₹ 10 ಕೋಟಿ ಸಂಗ್ರಹ ಆಗಿದೆ’ ಎಂದೂ ಅವರು ಮಾಹಿತಿ ನೀಡಿದರು.