ಹಲವು ಸಂದರ್ಭಗಳಲ್ಲಿ ಈ ಅಕ್ರಮ ಗೋ ಸಾಗಾಟ ಮತ್ತು ಗೋವುಗಳನ್ನು ವಧೆ ಮಾಡುವವರ ವಿರುದ್ದ ಹೋರಾಟ ನಡೆಸಿದ ಗೋ ರಕ್ಷಕರ ವಿರುದ್ದ ರಾಜ್ಯದಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಗೋರಕ್ಷಕರ ವಿರುದ್ದ ಈ ರೀತಿ ಪ್ರಕರಣಗಳು ದಾಖಲಾಗಿರುವುದು ಖಂಡನೀಯವಾಗಿದ್ದು, ಇಂತಹ ಪ್ರಕರಣಗಳನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಗೋಸಾಗಾಣೆ ಮಾಡುವವರ ಮತ್ತು ಗೋ ವಧೆ ಮಾಡುವವರ ವಿರುದ್ಧ ಯಾರೂ ಧ್ವನಿ ಎತ್ತದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅಪ್ಪಚ್ಚು ರಂಜನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಸರ್ಕಾರ ಕೂಡಲೇ ಗೋರಕ್ಷಕರ ವಿರುದ್ಧ ರಾಜ್ಯದಾದ್ಯಂತ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಆದೇಶ ನೀಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.