ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ನೌಕರರಿಗೂ ‘ಆರೋಗ್ಯ ಭಾಗ್ಯ’ ಯೋಜನೆ ವಿಸ್ತರಿಸಬೇಕು ಎಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯ ಸಂಬಂಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
‘ಈ ಯೋಜನೆಯನ್ನು ಎಲ್ಲ ಇಲಾಖಾ ನೌಕರರಿಗೂ ಅನ್ವಯಗೊಳಿಸುವ ಭರವಸೆ ಮುಖ್ಯಮಂತ್ರಿಯವರಿಂದ ಸಿಕ್ಕಿದೆ. ಸರ್ಕಾರಿ ಆದೇಶ ಹೊರಡಿಸಬೇಕಾಗಿದೆ’ ಎಂದು ಸಂಘದ ಪದಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಆರನೇ ವೇತನ ಆಯೋಗದ ವರದಿಯ ಅನುಚ್ಛೇದ 2ರಲ್ಲಿ ‘ಆರೋಗ್ಯ ಭಾಗ್ಯ’ವನ್ನು ಎಲ್ಲ ನೌಕರರಿಗೂ ವಿಸ್ತರಿಸುವ ಬಗ್ಗೆ ಉಲ್ಲೇಖವಿದೆ. ಪೊಲೀಸ್ ಇಲಾಖೆಯಲ್ಲಿ ಇರುವಂತೆ ಇತರ ಎಲ್ಲ ಇಲಾಖೆಗಳಲ್ಲೂ ಈ ಯೋಜನೆ ಜಾರಿ ಮಾಡುವಂತೆಯೂ ಮನವಿ ಮಾಡಲಾಗಿತ್ತು ಎಂದರು.
ಮುಖ್ಯಮಂತ್ರಿಯವರ ಸೂಚನೆ ಯಂತೆ ಮುಖ್ಯ ಕಾರ್ಯದರ್ಶಿಯವರು ಆದಷ್ಟು ಬೇಗ ಆದೇಶ ಹೊರಡಿಸಬೇಕು. ಇದರಿಂದ ಸುಮಾರು 15 ಲಕ್ಷ ನೌಕರರು ಮತ್ತು ಕುಟುಂಬದ ಸದಸ್ಯರಿಗೆ ಪ್ರಯೋಜನವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ನಗದು ರಹಿತ ಆರೋಗ್ಯ ಸೇವೆಯನ್ನು ಜಾರಿ ಮಾಡಿದರೆ ಹೆಚ್ಚು ಉಪಯುಕ್ತ. ಈಗ ಚಿಕಿತ್ಸಾ ವೆಚ್ಚದ ಪಾವತಿ ವರ್ಷ ಕಳೆದರೂ ಆಗುತ್ತಿಲ್ಲ ಎಂದು ಪದಾಧಿಕಾರಿಗಳು ಅಭಿಪ್ರಾಯಪಟ್ಟರು.