ನವದೆಹಲಿ: ರಾಮಸೇತು ನೈಸರ್ಗಿಕವೇ ಅಥವಾ ಮಾನವ ನಿರ್ಮಿತವೇ ಎಂಬ ಬಗ್ಗೆ ಯಾವುದೇ ಅಧ್ಯಯನ ನಡೆಸುವುದಿಲ್ಲ ಅಥವಾ ಅಂತಹ ಅಧ್ಯಯನಕ್ಕೆ ನೆರವು ಕೂಡ ನೀಡುವುದಿಲ್ಲ ಎಂದು ಭಾರತೀಯ ಇತಿಹಾಸ ಸಂಶೋಧನಾ ಪರಿಷತ್ (ಐಸಿಎಚ್ಆರ್) ಮುಖ್ಯಸ್ಥ ಅರವಿಂದ್ ಜಮಖೇಡ್ಕರ್ ತಿಳಿಸಿದ್ದಾರೆ.
ಪರಿಷತ್ ಈ ಮೊದಲು ಘೋಷಿಸಿದ್ದ ಇಂತಹ ಯೋಜನೆಯನ್ನು ಜಮಖೇಡ್ಕರ್ ರದ್ದುಗೊಳಿಸಿದ್ದಾರೆ. ರಾಮಸೇತು ಕುರಿತು ಅಧ್ಯಯನ ನಡೆಸುವುದಾಗಿ ಐಸಿಎಚ್ಆರ್ ಕಳೆದ ಮಾರ್ಚ್ನಲ್ಲಿ ಘೋಷಿಸಿತ್ತು.
‘ಇಂತಹ ಅಧ್ಯಯನ ನಡೆಸಬೇಕೆಂದು ಇತಿಹಾಸ ತಜ್ಞರೊಬ್ಬರು ಪ್ರಸ್ತಾವ ಇರಿಸಿದ್ದರು. ಐಸಿಎಚ್ಆರ್ ಸದಸ್ಯರು ಇದನ್ನು ವಿರೋಧಿಸಿದ್ದಾರೆ’ ಎಂದು ಜಮಖೇಡ್ಕರ್ ಹೇಳಿದ್ದಾರೆ.
ಜಮಖೇಡ್ಕರ್ ಅವರು ಐಸಿಎಚ್ಆರ್ ಅಧ್ಯಕ್ಷರಾಗಿ ಮಾರ್ಚ್ 5ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
‘ಉತ್ಖನನ ನಡೆಸುವುದಿಲ್ಲ’
‘ಉತ್ಖನನ ನಡೆಸುವುದು ಹಾಗೂ ಅಂತಹ ಕೆಲಸಗಳನ್ನು ಮಾಡುವುದು ಇತಿಹಾಸ ತಜ್ಞರ ಕೆಲಸವಲ್ಲ. ಇದಕ್ಕಾಗಿ ಪ್ರತ್ಯೇಕವಾಗಿ ಭಾರತೀಯ ಪ್ರಾಚ್ಯವಸ್ತು ಇಲಾಖೆ ಇದೆ. ಐಸಿಎಚ್ಆರ್ ಈ ವಿಷಯವನ್ನು ಸಂಬಂಧಪಟ್ಟ ಸಂಸ್ಥೆಗೆ ಶಿಫಾರಸು ಮಾಡಬಹುದಷ್ಟೆ’ ಎಂದು ಜಮಖೇಡ್ಕರ್ ತಿಳಿಸಿದ್ದಾರೆ.
ಸೇತುಸಮುದ್ರಂ ವಿವಾದ
ಸೇತುಸಮುದ್ರಂ ಹಡಗು ಮಾರ್ಗ ಯೋಜನೆಗೆ ಹಿಂದಿನ ಯುಪಿಎ ಸರ್ಕಾರ ಚಾಲನೆ ನೀಡುವುದರೊಂದಿಗೆ ರಾಮಸೇತು ವಿಚಾರದ ಚರ್ಚೆ ಮುನ್ನೆಲೆಗೆ ಬಂದಿತ್ತು. ಈ ಯೋಜನೆಯು ರಾಮಸೇತುವನ್ನು ನಾಶ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ವ್ಯಾಪಕ ಪ್ರತಿಭಟನೆಗಳೂ ನಡೆದಿದ್ದವು.