ಬೆಳಗಾವಿ: ಅರಿವು ಯೋಜನೆಯಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಮೊತ್ತದ ಶೇ 75ರಷ್ಟು ಸಾಲ ನೀಡಬೇಕು ಎಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸು ಮಾಡಿದೆ.
ಸಮಿತಿಯ ವರದಿಯನ್ನು ವಿಧಾನಸಭೆಯಲ್ಲಿ ಸಮಿತಿಯ ಅಧ್ಯಕ್ಷ ಎನ್.ಎ.ಹ್ಯಾರಿಸ್ ಗುರುವಾರ ಮಂಡಿಸಿದರು.
ವಿದ್ಯಾರ್ಥಿಗಳಿಗೆ ನೀಡಲಾಗುವ ಸಾಲವನ್ನು 2 ಹಾಗೂ 3ನೇ ವರ್ಷದಲ್ಲಿ ವಸೂಲಿ ಮಾಡಲಾಗುತ್ತದೆ. ಅದರ ಬದಲು, ಶಿಕ್ಷಣ ಪೂರ್ಣಗೊಂಡು ಉದ್ಯೋಗ ಸಿಕ್ಕ ಬಳಿಕ ಸಾಲ ಮರುಪಾವತಿಗೆ ಅವಕಾಶ ಮಾಡಿಕೊಡಬೇಕು ಎಂದೂ ಸಮಿತಿ ಸೂಚಿಸಿದೆ.
ಸಮಿತಿಯ ಇತರ ಶಿಫಾರಸುಗಳು:
*ಬೆಂಗಳೂರಿನ ಬೆಳ್ಳಹಳ್ಳಿ ಗ್ರಾಮದ ಸರ್ಕಾರಿ ಜಾಗದ ಒತ್ತುವರಿ ಪ್ರಯತ್ನ ನಡೆದಿದೆ. ಈ ಜಾಗದ ಸುತ್ತ ಬೇಲಿ ಹಾಕಬೇಕು ಹಾಗೂ ವಕ್ಫ್ ಆಸ್ತಿ ಎಂಬ ಫಲಕ ಹಾಕಬೇಕು.
*ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಆಮೆಗತಿಯಲ್ಲಿ ಸಾಗಿದೆ. ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.
*ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಬೇಕು.
*ಖಬರ್ಸ್ತಾನ್ಗಳಿಗೆ ಅಗತ್ಯ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.