ಮದ್ದೂರು: ’ಅಪ್ಪ- ಮಕ್ಕಳದ್ದು ಸೂಟ್ಕೇಸ್ ಸಂಸ್ಕೃತಿ ಎಂದು ಲೇವಡಿ ಮಾಡಿರುವ ಶಾಸಕ ಡಿ.ಸಿ.ತಮ್ಮಣ್ಣ ಅವರು ನಾವು ಯಾರಿಂದ ಯಾವ ಸಂದರ್ಭದಲ್ಲಿ ಹಣ ಪಡೆದಿದ್ದೇವೆ ಎಂಬುದನ್ನು ಬಹಿರಂಗವಾಗಿ ಸಾಬೀತಪಡಿಸಲಿ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಸವಾಲು ಹಾಕಿದರು.
ತಾಲ್ಲೂಕಿನ ಕೆ.ಹೊನ್ನಲಗೆರೆಯಲ್ಲಿ ಭಾನುವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಅವರು, ‘ಯಾರದ್ದು ಸೂಟ್ಕೇಸ್ ಸಂಸ್ಕೃತಿ ಎಂಬುದು ಜನರಿಗೆ ತಿಳಿದಿದೆ. ಕೆಐಡಿಬಿಯಲ್ಲಿ ಅಧಿಕಾರಿಯಾಗಿದ್ದಾಗ ಇವರು ಎಸಗಿದ ಭ್ರಷ್ಟಾಚಾರವೇನು? ಇವರು ಅಮಾನತುಗೊಂಡು ಧಾರವಾಡಕ್ಕೆ ವರ್ಗಾವಣೆಗೊಂಡ ಬಗೆಯೇನು? ಸಾಮಾನ್ಯ ಗುಮಾಸ್ತನಾಗಿ ಕೆಲಸಕ್ಕೆ ಸೇರಿಕೊಂಡ ಇವರು, ಇಂದು ಕೋಟ್ಯಂತರ ರೂಪಾಯಿ ಹಣ ಸಂಪಾದನೆ ಮಾಡಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
‘ಯಾವುದೇ ಹೋರಾಟದಲ್ಲಿ ಭಾಗಿಯಾಗದೆ, ಕಾವೇರಿ ನದಿ ನೀರಿನ ವಿಷಯವಾಗಿ ಹೋರಾಟದ ಮಾಡಿದವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಎರಡು ವರ್ಷಗಳ ಹಿಂದೆ ವೈದ್ಯ ಲಕ್ಷ್ಮಣ್ ಎಂಬುವರಿಗೆ ₹ 9 ಕೋಟಿ ವಂಚನೆ ಮಾಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಈ ಪ್ರಕರಣ ಸಂಬಂಧ ಶಾಸಕರಿಗೆ ವಾರಂಟ್ ಜಾರಿಯಾಗಿತ್ತು. ಈ ಬಗೆ ನನ್ನ ಬಳಿ ದಾಖಲೆಯಿದೆ. ಈ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಡಾ.ಲಕ್ಷ್ಮಣ್ ಅವರು ಕ್ಷೇತ್ರಕ್ಕೆ ಆಗಮಿಸಿ ಸತ್ಯ ತಿಳಿಸಲಿದ್ದಾರೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಮಾತನಾಡಿ, ‘ಲೂಟಿ ಎನ್ನುವ ಶಬ್ದದ ಅರ್ಥವೇ ನಮಗೆ ಗೊತ್ತಿಲ್ಲ. ಲೂಟಿ ಮಾಡುವವರಿಗೆ ಈ ಶಬ್ದದ ಅರ್ಥ ಚೆನ್ನಾಗಿ ಗೊತ್ತು’ ಎಂದು ತಮ್ಮಣ್ಣ ಅವರಿಗೆ ಪರೋಕ್ಷ ತಿರುಗೇಟು ನೀಡಿದರು.
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ರಾಜೀವ್, ತಾಲ್ಲೂಕು ಪಂಚಾಯಿತಿ ಸದಸ್ಯ ಚಲುವರಾಜು, ಮುಖಂಡರಾದ ತೈಲೂರು ರಘು, ಕೆಂಪಣ್ಣ, ಅಂಕರಾಜು, ಶಿವಣ್ಣ, ಆತ್ಮಾನಂದ್, ಎಂ.ಪಿ.ಅಮರ ಬಾಬು, ಶಿವಣ್ಣ, ರಾಜಣ್ಣ, ಅಪ್ಪಾಜಿ ಸೇರಿದಂತೆ ಇತರರು ಇದ್ದರು.