ಮೈಸೂರು: ಹಲ್ಲೆಗೆ ಒಳಗಾಗಿ ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ತನ್ವೀರ್ ಸೇಠ್ ಅವರ ಆರೋಗ್ಯದಲ್ಲಿ ಮಂಗಳವಾರ ಚೇತರಿಕೆ ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಅಧೀಕ್ಷಕ ಡಾ.ಉಪೇಂದ್ರ ಶೆಣೈ, ‘ತನ್ವೀರ್ ಸೇಠ್ ಚಿಕಿತ್ಸೆಗೆ ಉತ್ತಮವಾಗಿಯೆ ಸ್ಪಂದಿಸುತ್ತಿದ್ದಾರೆ. ಸಂಜೆ ವೇಳೆಗೆ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗುವುದು’ಎಂದು ಹೇಳಿದ್ದಾರೆ.
ಈ ಮಧ್ಯೆ ತನ್ವೀರ್ ಸೇಠ್ ಅವರ ಗನ್ ಮ್ಯಾನ್ ಫೈರೋಜ್ ಖಾನ್ ಅವರನ್ನು ಅಮಾನತುಪಡಿಸಲಾಗಿದೆ. ಫೈರೋಜ್ ಖಾನ್ ಇದ್ದಾಗ್ಯೂ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿರುವುದು ಭದ್ರತಾಲೋಪ ಎಂದು ಪರಿಗಣಿಸಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ರಾತ್ರಿ ಇಡೀ ವಿಚಾರಣೆ: ಹಲ್ಲೆಗೆ ಸಂಬಂಧಿಸಿದಂತೆ ವಶಕ್ಕೆ ತೆಗೆದುಕೊಂಡಿರುವ 10 ಮಂದಿಯನ್ನು ಪೊಲೀಸರು ಅಜ್ಞಾತಸ್ಥಳದಲ್ಲಿ ರಾತ್ರಿ ಇಡಿ ವಿಚಾರಣೆ ನಡೆಸಿದ್ದಾರೆ. ಇನ್ನಷ್ಟು ಮಂದಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.