ಬಳ್ಳಾರಿ:‘ನಾನು ಉಪಮುಖ್ಯಮಂತ್ರಿ ಆಗುವುದು ಮುಖ್ಯವಲ್ಲ. ನಾನು ಪ್ರತಿನಿಧಿಸುವ ವಾಲ್ಮೀಕಿ ಸಮುದಾಯದ ಮೀಸಲು ಪ್ರಮಾಣವನ್ನು ಶೇ 7.5ಕ್ಕೆ ಹೆಚ್ಚಿಸಿದರೆ ಎಲ್ಲ ಸಿಕ್ಕಂತೆ. ಹೀಗಾಗಿ ಯಾರೂ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬಾರದು ಎಂದು ಬೆಂಬಲಿಗರು, ಸಮುದಾಯದವರಲ್ಲಿ ಮನವಿ ಮಾಡಿರುವೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲುಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೀಸಲಾತಿ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಈ ವಿಚಾರದಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ, ರಾಜುಗೌಡ ಎಲ್ಲರೂ ಒಂದಾಗಿದ್ದೇವೆ’ ಎಂದರು.
‘ಪಕ್ಷ ತಾಯಿ ಇದ್ದಂತೆ. ಅದರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಯಾರೂ ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡಬಾರದು. ಪಕ್ಷವು ಎಲ್ಲರಿಗೂ ನ್ಯಾಯ ಕೊಡಲಿದೆ. ಪ್ರತಿಭಟನೆ ಮಾಡದಂತೆ ನಿನ್ನೆಯೇ ಟ್ವಿಟರ್ ಮೂಲಕ ಬೆಂಬಲಿಗರಲ್ಲಿ ಮನವಿ ಮಾಡಿದ್ದೆ. ಈಗ ಮತ್ತೊಮ್ಮೆ ಕೋರುತ್ತಿದ್ದೇನೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕೆಂದು ಬೇಡಿಕೆ ಇಟ್ಟಿಲ್ಲ. ಸದ್ಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ’ ಎಂದುರಾಮುಲುಹೇಳಿದರು.