ಬಲಿಜ ಸಮಾಜದವರಿಗೆ 1984 ರಿಂದ 1994 ಏಪ್ರಿಲ್ವರೆಗೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯ ಸಿಗುತ್ತಿತ್ತು. ರಾಜ್ಯ ಸರ್ಕಾರ ಹಿಂದುಳಿದ ವರ್ಗ2ಎ ಅಡಿ ಒದಗಿಸುತ್ತಿರುವ ಮೀಸಲಾತಿ ಪುನರ್
ವಿಮರ್ಶೆ ಸಲುವಾಗಿ 1994ರಲ್ಲಿ ಎಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಿತ್ತು. ಸಮಿತಿಯ
ಶಿಫಾರಸಿನ ಮೇರೆಗೆ ಸರ್ಕಾರ ಪ್ರವರ್ಗ 2ಎಯಲ್ಲಿದ್ದ 103 ಜಾತಿಗಳಲ್ಲಿ ಕೇವಲ ಬಲಿಜ ಸಮುದಾಯವನ್ನು ಕೈಬಿಟ್ಟು, ಪ್ರವರ್ಗ 3ಎಗೆ ಸೇರಿಸಿತ್ತು.
2011ರಲ್ಲಿ ಶಿಕ್ಷಣದಲ್ಲಿ ಮಾತ್ರ ಪ್ರವರ್ಗ 2ಎ ಅಡಿ ಮೀಸಲಾತಿ ಸೌಲಭ್ಯ ಕಲ್ಪಿಸಲಾಯಿತು.
‘ಜಾತಿವಾರು ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಯಾವುದಾದರೂ ಜಾತಿಯನ್ನು ಸೇರಿಸುವುದು ಅಥವಾ ಕೈಬಿಡುವುದು ಸಹಜ. ಆದರೆ, ಪಟ್ಟಿಯಿಂದ ನಮ್ಮ ಸಮಾಜವನ್ನು ಕೈಬಿಡುವಂತೆ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿಲ್ಲ. ಇದನ್ನು ಮಾಡಿದ್ದು ರಾಜ್ಯ ಸರ್ಕಾರ. ಹಾಗಾಗಿ ಮರುಸೇರ್ಪಡೆಯನ್ನೂ ಸರ್ಕಾರವೇ ಮಾಡಬೇಕು. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗವೂ ಸರ್ಕಾರಕ್ಕೆ ಪತ್ರ
ಬರೆದಿದೆ’ ಎಂದು ಪಿ.ಸಿ.ಮೋಹನ್ ತಿಳಿಸಿದರು.