ಬೆಂಗಳೂರು:‘ದೇಶದಲ್ಲಿ ಯಾವುದೇ ಅರಣ್ಯವನ್ನು ಹಾದುಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧ ಇಲ್ಲ ಎಂಬ ಕೇರಳ ಸರ್ಕಾರದ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದೆ’ ಎಂದು ಕಾಂಗ್ರೆಸ್ ಮುಖಂಡ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ಸರ್ಕಾರ ತೆಗೆದುಕೊಂಡಿತ್ತು.
‘ತೆಲಂಗಾಣದ ಶ್ರೀಶೈಲ ಹುಲಿ ರಕ್ಷಿತಾರಣ್ಯವಿರುವ ಎರಡು ಹೆದ್ದಾರಿಗಳಲ್ಲಿ, ತಮಿಳುನಾಡಿನ ಮದುಮಲೈ ಹುಲಿ ಮೀಸಲು ಅರಣ್ಯವಿರುವ ಹೆದ್ದಾರಿ ಸೇರಿದಂತೆ ದೇಶದ ಹಲವು ಕಡೆಗಳಲ್ಲಿನ ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ’ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಬಂಡೀಪುರ ಅರಣ್ಯದ ನಡುವೆ ರಾತ್ರಿ ವೇಳೆ ವಾಹನ ಸಂಚಾರ ಪುನರಾರಂಭಿಸಬೇಕು ಎಂಬ ಒತ್ತಡಗಳಿಗೆ ಮಣಿಯಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚಂದ್ರಶೇಖರ್ ಪತ್ರ ಬರೆದಿದ್ದರು.