ಬೀಜಿಂಗ್: ಚೀನಾದ ಝೇಜಿಯಾಂಗ್ ಪ್ರಾಂತ್ಯದಲ್ಲಿ ಭಾರತದ ವ್ಯಕ್ತಿಯೊಬ್ಬರು ಅಪಹರಣಕ್ಕೆ ಒಳಗಾಗಿರುವ ಶಂಕೆ ಇದೆ.
ಮುಂಬೈ ನಿವಾಸಿ ತಾರ್ಬೆಜ್ ಅಕ್ಬರಲಿ ಬಾನ ಅವರು ಎಲ್ಲಿದ್ದಾರೆಂಬ ವಿವರಗಳನ್ನು ನೀಡಬೇಕೆಂದು ಚೀನಾದ ವಿದೇಶಾಂಗ ಸಚಿವಾಲಯದ ಶಾಂಘೈನಲ್ಲಿನ ಕಚೇರಿಗೆ ಭಾರತದ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಯಿವುನಲ್ಲಿರುವ ಚೀನಾ ಉತ್ಪನ್ನಗಳ ಮಾರುಕಟ್ಟೆಯಿಂದ ತಾರ್ಬೆಜ್ ಅವರು ಕಾಣೆಯಾಗಿದ್ದಾರೆ. ಇತ್ತೀಚೆಗೆ ಈ ಘಟನೆ ನಡೆದಿದೆ. ವ್ಯಾಪಾರ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ವ್ಯಾಪಾರಿಗಳೇ ಇವರನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ.
ವ್ಯಾಪಾರಿಗಳಿಂದ ತಮಗೆ ಜೀವ ಭಯ ಇರುವ ಬಗ್ಗೆ ದೂರು ನೀಡಲು ತಾರ್ಬೆಜ್ ಅವರು ಕೆಲ ದಿನಗಳ ಹಿಂದೆ ಯಿವುನ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದರು. ಆ ನಂತರದ ದಿನಗಳಲ್ಲೇ ಅವರು ಕಾಣೆಯಾಗಿದ್ದಾರೆ.
ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಇರುವ ಯಿವುಗೆ ಭಾರತದ ಸಾವಿರಾರು ವ್ಯಾಪಾರಿಗಳು ಭೇಟ ನೀಡುವುದು ಸಾಮಾನ್ಯ. 2012ರಲ್ಲಿ ಕೂಡ ವ್ಯಾಪಾರದಲ್ಲಿ ವಂಚನೆ ಕಾರಣಕ್ಕೆ ಭಾರತದ ಇಬ್ಬರು ವ್ಯಾಪಾರಿಗಳು ಚೀನಾದಲ್ಲಿ ದಾವೆ ಎದುರಿಸಬೇಕಾಗಿತ್ತು.