ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ 216 ವಿದ್ಯಾರ್ಥಿಗಳು 325 ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳಲಿದ್ದಾರೆ.
ಪದವಿ, ಪ್ರಥಮ ರ್ಯಾಂಕ್, ಚಿನ್ನದ ಪದಕ ಮತ್ತು ನಗದು ಬಹುಮಾನಗಳನ್ನು ಪಡೆಯುವುದರಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ವಿದ್ಯಾರ್ಜನೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಮೂಹಕ್ಕೆ ಏಪ್ರಿಲ್ 22ರಂದು ನಡೆಯುವ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಪದವಿ ಪ್ರಮಾಣಪತ್ರ ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡಲಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆಂದೇ ಮೀಸಲಿಡಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಚಿನ್ನದ ಪದಕಗಳಿಗೆ ಆಚಾರ್ಯ ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿನಿ ಎಂ.ಪಿ.ಮಂಜುಶ್ರೀ, ವಿಶ್ವವಿದ್ಯಾಲಯದ ಗಣಿತ ವಿಭಾಗದ ಜಿ.ಮನೋಹರ್, ಸಂವಹನ ವಿಭಾಗದ ಎಂ.ಮುನಿರಾಜ ಭಾಜನರಾಗಿದ್ದಾರೆ.
‘ಪ್ರತಿ ಚಿನ್ನದ ಪದಕವು 20 ಗ್ರಾಂ ಬೆಳ್ಳಿಯ ಬೇಸ್ ಮೇಲೆ 1.3 ಗ್ರಾಂ ಚಿನ್ನದ ಲೇಪನ ಹೊಂದಿರುತ್ತದೆ. ಪ್ರತಿ ಪದಕಕ್ಕೆ ₹ 6,000 ವೆಚ್ಚ ಮಾಡಲಾಗಿದೆ. ಒಟ್ಟು ₹ 14 ಲಕ್ಷ ಪದಕಗಳಿಗೆಂದೇ ವ್ಯಯಿಸಲಾಗಿದೆ’ ಎಂದು ಕುಲಪತಿ ಕೆ.ಆರ್.ವೇಣುಗೋಪಾಲ್ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಘಟಿಕೋತ್ಸವ ಆರಂಭವಾಗಲಿದೆ. ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
* ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಕನಿಷ್ಠ ₹ 500 ದಿಂದ ₹ 5,000 ವರೆಗಿನ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.
-ಕೆ.ಆರ್.ವೇಣುಗೋಪಾಲ್, ಕುಲಪತಿ, ಬೆಂಗಳೂರು ವಿ.ವಿ.
ಅಂಕಿ–ಅಂಶ
65,039
ಪದವಿ ಪಡೆಯುತ್ತಿರುವ ಒಟ್ಟು ವಿದ್ಯಾರ್ಥಿಗಳು
22,970
ಪದವಿ ಗಳಿಸಿರುವ ವಿದ್ಯಾರ್ಥಿಗಳು
32,201
ಪದವಿ ಗಳಿಸಿರುವ ವಿದ್ಯಾರ್ಥಿನಿಯರು
92
ನಗದು ಬಹುಮಾನ ಗಳಿಸಿದ ವಿದ್ಯಾರ್ಥಿಗಳು
166
ಪಿಎಚ್.ಡಿ. ಪದವಿ ಗಳಿಸಿದ ಸಂಶೋಧನಾರ್ಥಿಗಳು
ಪದಕ ಗಳಿಕೆ
325
ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು(ಪ್ರಥಮ ರ್ಯಾಂಕ್ ಸೇರಿ)
87
ಪದಕ ಗಳಿಸಿದ ವಿದ್ಯಾರ್ಥಿಗಳು
154
ಪದಕ ಗಳಿಸಿದ ವಿದ್ಯಾರ್ಥಿನಿಯರು
84
ಪ್ರಥಮ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳು
ಗೌರವ ಡಾಕ್ಟರೇಟ್ಗೆ ಭಾಜನರಾದವರು
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ , ಪ್ರಸೂತಿ ತಜ್ಞೆ ಡಾ.ಕಾಮಿನಿ ರಾವ್, ಉದ್ಯಮಿ ಎಸ್.ವಿ.ವಿ.ಸುಬ್ರಹ್ಮಣ್ಯ ಗುಪ್ತ.