ಹಾವೇರಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಆಟೊದಲ್ಲಿ ಬಂದು, ಬ್ಯಾಗ್ ಇಟ್ಟಿರೋದು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು ತನಿಖೆಗೆ ಸೂಚನೆ ನೀಡಲಾಗಿದೆ ಎಂದುಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ತಾಲೂಕಿನ ಗೊಟಗೋಡಿ ಬಳಿಯ ಜಾನಪದ ವಿಶ್ವ ವಿದ್ಯಾಲಯದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಆಟೊದಲ್ಲಿ ಬಂದು, ಬ್ಯಾಗ್ ಇಟ್ಟಿರೋದು ಸಿಸಿಟಿವಿಯಲ್ಲಿ ಗುರುತಿಸಲಾಗಿದೆ. ಸಂಶಯಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ಸಿಐಎಸ್ಎಫ್ ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅದರಲ್ಲಿ ಸಜೀವ್ ಬಾಂಬ್ ಪತ್ತೆಯಾಗಿದೆ.
ಇದರ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಲು ಪೊಲೀಸರುಕಾರ್ಯಪ್ರವೃತ್ತರಾಗಿದ್ದು, ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಮಂಗಳೂರನ್ನು ಭಯೋತ್ಪಾದನಾ ಚಟುವಟಿಕೆ ತಾಣ ಎಂದು ಗುರುತಿಸಲಾಗಿದೆ. ನಮ್ಮ ದೇಶದ ಆರ್ಥಿಕ ಚಟುವಟಿಕೆಗಳಿಗೆ ಭಂಗ ತರುವ ಕೃತ್ಯವಿದು. ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು.
ಗಣರಾಜೋತ್ಸವ ಬಂದಾಗ ದೇಶ ಹಾಗೂ ರಾಜ್ಯದಲ್ಲಿ ಈ ರೀತಿ ವಿಧ್ವಂಸಕ ಕೃತ್ಯಕ್ಕೆ ಭಯೋತ್ಪಾದಕರು ಪ್ರಯತ್ನ ನಡೆಸುತ್ತಲೆ ಬಂದಿದ್ದಾರೆ. ಅದನ್ನು ನಾವು ವಿಫಲ ಮಾಡುತ್ತ ಬಂದಿದ್ದೇವೆ ಎಂದರು.
ಅದಕ್ಕಾಗಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.