ಬೆಂಗಳೂರು: ‘ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಹುಟ್ಟು ಹಾಕಿದ ಕೀರ್ತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಲ್ಲುತ್ತದೆ. ಈ ವ್ಯಕ್ತಿ ಪಕ್ಷದಲ್ಲಿ ಮುಂದುವರಿದರೆ ಕಾಂಗ್ರೆಸ್ನ ನಾಶ ಖಚಿತ’ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ ತಿಳಿಸಿದರು.
‘ಪಕ್ಷದ ಅಧ್ಯಕ್ಷರಾದವರು ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಗುಂಪುಗಾರಿಕೆ ಮಾಡಿದ ಪರಿಣಾಮವೇ ನಾವೆಲ್ಲ ಹೊರ ಬರಬೇಕಾಯಿತು ಮತ್ತು ಸರ್ಕಾರ ಪತನವಾಯಿತು’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
‘ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಿದ್ದರಾಮಯ್ಯ ಮತ್ತು ಗುಂಡೂರಾವ್ ಕುರಿತು ಹೇಳಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಎಸ್ವೈ ಹೇಳಿಕೆಯಿಂದ ಸಂತಸ: ‘ಎಲ್ಲ ಅನರ್ಹ ಶಾಸಕರಿಗೂ ಟಿಕೆಟ್ ನೀಡುವುದಾಗಿ ಯಡಿಯೂರಪ್ಪ ಹೇಳಿರುವುದು ಸಂತಸದ ವಿಚಾರ. ಆದರೆ, ಮುಂದೆ ಯಾವ ಪಕ್ಷದಿಂದ ಕಣಕ್ಕೆ ಇಳಿಯಬೇಕು ಎಂಬುದನ್ನು ನಾವು ಒಟ್ಟಾಗಿ ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದು ಬಿ.ಸಿ.ಪಾಟೀಲ ತಿಳಿಸಿದರು.
‘ನಮ್ಮ ರಾಜಕೀಯ ಭವಿಷ್ಯದ ಬಗ್ಗೆ ರಾಜೀನಾಮೆ ಕೊಟ್ಟಾಗಲೂ ಆತಂಕಗೊಂಡಿರಲಿಲ್ಲ. ಈಗಲೂ ಆತಂಕಗೊಂಡಿಲ್ಲ’ ಎಂದರು.
‘ಹಿರೇಕೆರೂರು ಕ್ಷೇತ್ರದಲ್ಲಿ ಯು.ಬಿ.ಬಣಕಾರ್ ಜತೆ ಹಲವು ಬಾರಿ ಸೆಣಸಿದ್ದೇನೆ. ಆದರೆ, ಈ ಬಾರಿ ಒಂದೇ ಕಡೆ ಇರುತ್ತೇವೆ. ಮುಖ್ಯಮಂತ್ರಿ ನಮ್ಮಿಬ್ಬರನ್ನು ಮುಖಾಮುಖಿ ಭೇಟಿ ಮಾಡಿಸಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.