ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆಗಳ ಅಭಿವೃದ್ಧಿಗಾಗಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಭೂ ಪರಿಹಾರ ಹಸ್ತಾಂತರ ಆದೇಶವನ್ನೂ ನೀಡಿರುವ 4,333 ಎಕರೆ 30 ಗುಂಟೆ ಜಾಗಗಳಲ್ಲಿ ಈಗ ಅನಧಿಕೃತ ಕಟ್ಟಡಗಳಿವೆ. ಈ ಕಟ್ಟಡಗಳನ್ನು ಸಕ್ರಮ ಮಾಡಲು ಸಾಧ್ಯವೇ? ಒಂದು ವೇಳೆ ಮಾಡಿದರೂ ಅದು ಸರಿಯೇ?
‘ಬಿಡಿಎಯಿಂದ ಪರಿಹಾರ ಪಡೆದು ಅವರೇ ಕಟ್ಟಡ ನಿರ್ಮಿಸಿದ್ದರೆ ಅದನ್ನು ಸಕ್ರಮ ಮಾಡಲು ಸಾಧ್ಯವೇ ಇಲ್ಲ. ಅಂತಹ ಕಟ್ಟಡಗಳನ್ನು ಮುಲಾಜಿಲ್ಲದೇ ಬಿಡಿಎ ಒತ್ತುವರಿ ತೆರವು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
‘ಭೂಸ್ವಾಧೀನ ಕಾಯ್ದೆಯಂತೆ 6–1 ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿಕೊಂಡ ಜಾಗವನ್ನು ಮತ್ತೆ ಬಿಟ್ಟುಕೊಡುವುದಕ್ಕೆ
ಬಿಡಿಎಗೂ ಅಧಿಕಾರ ಇಲ್ಲ.ಅಕ್ರಮ ಸಕ್ರಮ ಮಾಡುವಾಗ ಇಂತಹ ಜಾಗದಲ್ಲಿರುವ ಕಟ್ಟಡಗಳನ್ನು ಸಕ್ರಮಗೊಳಿಸಿದರೆ ಅದು ತಪ್ಪಾಗುತ್ತದೆ. ಈ ಬಗ್ಗೆ ಮತ್ತೆ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ಸೃಷ್ಟಿಯಾದಂತಹ ತ್ರಿಶಂಕು ಸ್ಥಿತಿ ಮತ್ತೆ ಉಂಟಾಗಬಹುದು’ ಎಂದು ಅವರು ಎಚ್ಚರಿಸಿದರು. ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನಪಡಿಸಿಕೊಂಡ ಭೂಮಿ ಡಿನೋಟಿಫೈ ಮಾಡಿದ್ದನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.
ಇಷ್ಟೊಂದು ಅಕ್ರಮ ಹೇಗೆ?: ಇಷ್ಟೊಂದು ಪ್ರಮಾಣದ ಜಾಗದಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತಿದ್ದು ಹೇಗೆ? ಅವುಗಳನ್ನು ಬಿಡಿಎ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿಲ್ಲ ಏಕೆ? ಯಾವ ಸರ್ಕಾರಗಳೂ ಈ ನಿಟ್ಟಿನಲ್ಲಿ ಪ್ರಯತ್ನವನ್ನೇ ಪಟ್ಟಿಲ್ಲ ಏಕೆ ಎಂಬುದನ್ನು ಕೆದಕುತ್ತಾ ಹೋದಾಗ ಭೂಸ್ವಾಧೀನ ಪ್ರಕ್ರಿಯೆ ವೇಳೆ ನಡೆಯುವ ಎಡವಟ್ಟುಗಳೂ ಢಾಳಾಗಿ ಕಾಣಿಸುತ್ತವೆ.
ಯಾವುದಾದರೂ ಹೊಸ ಬಡಾವಣೆಗೆ ಎಷ್ಟು ಜಾಗ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದು ಅಂದಾಜು ಮಾಡಿದ ಬಳಿಕ ಬಿಡಿಎ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 4–1ರ ಅಡಿ ಪ್ರಾಥಮಿಕ ಅಧಿಸೂಚನೆ ಪ್ರಕಟಿಸುತ್ತದೆ. ಅಧಿಸೂಚನೆಯಲ್ಲಿ ಗುರುತಿಸಿರುವ ಜಾಗಗಳ ಮಾಲೀಕರಿಗೆ ಈ ಬಗ್ಗೆ ನೋಟಿಸ್ ನೀಡಬೇಕು.
‘ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿಸಿರುವ ಜಾಗದಲ್ಲಿ ಮನೆ ಅಥವಾ ಇತರ ಕಟ್ಟಡಗಳಿದ್ದರೆ ಮಾಲೀಕರು ಅಷ್ಟು ಜಾಗವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಲು ಕಾಯ್ದೆಯ ಸೆಕ್ಷನ್ 5 ಎ ಅವಕಾಶ ಕಲ್ಪಿಸುತ್ತದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಮಾಪನಾ ಸರ್ವೆ ನಡೆಸಿ, ಸಮಂಜಸ ಕಾರಣಗಳಿದ್ದರೆ ಮಾಲೀಕರು ಕೋರಿ
ದಷ್ಟು ಜಾಗವನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಬಹುದು’ ಎಂದು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಿದ್ದ
ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಆದರೆ, ಜಂಟಿ ಮಾಪನ ಸರ್ವೆ ದಾಖಲೆಯಲ್ಲಿ ಮಾತ್ರ ನಡೆಯುತ್ತದೆ. ಬಿಡಿಎ ಭೂಸ್ವಾಧೀನಾಧಿಕಾರಿಗಳು ಕೆಲವೊಮ್ಮೆ ಸ್ಥಳಕ್ಕೆ ಹೋಗದೆ ಆರ್ಟಿಸಿ ದಾಖಲೆ ನೋಡಿ ಅಂತಿಮ ಅಧಿಸೂಚನೆಗೆ ಕ್ರಮಕೈಗೊಳ್ಳುತ್ತಾರೆ. ಭೂಮಾಲೀಕರು ನೈಜ ಕಾರಣದಿಂದ ಜಾಗ ಬಿಟ್ಟುಕೊಡಲು ತಕರಾರು ತೆಗೆದರೂ ಕಿವಿಗೊಡುವುದಿಲ್ಲ. ತಾವು ಜಾಗ ಬಿಟ್ಟುಕೊಡಲು ಒಪ್ಪಿಲ್ಲ. ಹಾಗಾಗಿ ಇದು ನಮ್ಮದೇ ಸ್ವತ್ತು ಎಂದು ಭೂಮಾಲೀಕರು ಅಲ್ಲಿ ಕಟ್ಟಡ ನಿರ್ಮಿಸುತ್ತಾರೆ' ಎಂದು ಅವರು ವಿವರಿಸಿದರು.
‘ಅಂತಿಮ ಅಧಿಸೂಚನೆ ಬಳಿಕ ಆರ್ಟಿಸಿಯಲ್ಲಿ ಜಾಗ ಬಿಡಿಎ ಸ್ವತ್ತು ಎಂದು ನಮೂದಾಗುತ್ತದೆ. ಆದರೆ, ಅಸಲಿಗೆ ಅದು ಭೂಮಾಲೀಕರ ಸ್ವಾಧೀನದಲ್ಲೇ ಇರುತ್ತದೆ. ಕೆಲವೊಮ್ಮೆ ಅಧಿಕಾರಿಗಳು ಸರ್ವೆಗೆ ಹೋದಾಗ ರೈತರೆಲ್ಲ ಒಟ್ಟಾಗಿ ಅವರನ್ನು ಹಿಂದಕ್ಕೆ ಕಳುಹಿಸಿದ ಉದಾಹರಣೆಗಳೂ ಬಹಳಷ್ಟಿವೆ. ರೈತರಿಗೆ ರಾಜಕೀಯ ಪುಢಾರಿಗಳ ಬೆಂಬಲವೂ ಇರುತ್ತದೆ. ನಮಗೇಕೆ ಉಸಾಬರಿ ಎಂದು ಅಧಿಕಾರಿಗಳು ಸುಮ್ಮನಾಗುತ್ತಾರೆ' ಎಂದು ಅವರು ವಸ್ತುಸ್ಥಿತಿ ತೆರೆದಿಟ್ಟರು.
’ಕೆಲವು ಪ್ರಕರಣಗಳಲ್ಲಿ ಭೂಮಾಲೀಕರು ಪರಿಹಾರದ ಹಣ ಪಡೆಯದೇ ಕಾನೂನು ಹೋರಾಟ ನಡೆಸಿದ್ದೂ ಇದೆ. ನ್ಯಾಯಾಲಯ ಸೂಚಿಸಿದ ಖಾತೆಯಲ್ಲಿ ಪರಿಹಾರ ಜಮೆಯಾಗಿರುತ್ತದೆ. ವ್ಯಾಜ್ಯ ಇತ್ಯರ್ಥವಾಗುವವರೆಗೆ ಜಾಗ ಭೂಮಾಲೀಕರ ಸ್ವಾಧೀನದಲ್ಲೇ ಇರುತ್ತದೆ’ ಎಂದರು.
ವಂಚನೆ ಪ್ರಕರಣಗಳಲ್ಲಿ ಏನು ಕ್ರಮ
‘ಕೆಲವು ಪ್ರಕರಣಗಳಲ್ಲಿ ಪ್ರಾಥಮಿಕ ಅಧಿಸೂಚನೆ ಪ್ರಕಟವಾದ ಬಳಿಕವೂ ಜಾಗವನ್ನು ಭೂಮಾಲೀಕರು ಖಾತಾ ಆಧಾರದಲ್ಲಿ ಮಾರಾಟ ಮಾಡಿದ್ದೂ ಇದೆ. ಜಾಗ ಖರೀದಿಸಿದವರು ಅಲ್ಲಿ ಮನೆ ಕಟ್ಟಿದ್ದಾರೆ. ಅಧಿಕಾರಿಗಳೇ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಜಾಗವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ನೋಂದಾಯಿಸಿದ ಉದಾಹರಣೆಗಳೂ ಇವೆ. ಈ ರೀತಿ ಮೋಸ ಹೋಗಿರುವವರೂ ಅಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಬಿಡಿಎ ಸ್ಪಷ್ಟಪಡಿಸಬೇಕು’ ಎಂದು ಭೂಮಿ ಕಳೆದುಕೊಂಡಿರುವ ಸಂತ್ರಸ್ತ ಚಂದ್ರಕುಮಾರ್ ಒತ್ತಾಯಿಸಿದರು.
* 6–1 ಅಧಿಸೂಚನೆಯಾಗಿ ಸ್ವಾಧೀನಪಡಿಸಿಕೊಂಡ ಜಾಗ ಬಳಸಿಕೊಳ್ಳಲೇ ಬೇಕು
* ಪರಿಹಾರ ವಿತರಿಸಿದ ಜಾಗದ ಒತ್ತುವರಿ ಸಕ್ರಮ ಮಾಡಿದರೆ ಎದುರಾಗಬಹುದು ಕಾನೂನು ಬಿಕ್ಕಟ್ಟು
* ಶಿವರಾಮ ಕಾರಂತ ಬಡಾವಣೆಯ ಪರಿಸ್ಥಿತಿ ಮರುಕಳಿಸುವ ಅಪಾಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.