ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ದಳವಾಯಿಕಟ್ಟೆ ಗ್ರಾಮಸ್ಥರು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಏಳು ವರ್ಷದ ಹೆಣ್ಣು ಕರಡಿ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದೆ.
ನೀರು ಕುಡಿಯಲು ಕೆರೆಗೆ ಬಂದಿದ್ದ ಕರಡಿ, ಸಮೀಪದ ಗ್ರಾಮಕ್ಕೆ ನುಗ್ಗಿತ್ತು. ಕರಡಿ ದಾಳಿಗೆ ವ್ಯಕ್ತಿ ಹಾಗೂ ಜಾನುವಾರು ಬಲಿಯಾಗಿದ್ದವು. ಇದರಿಂದ ರೊಚ್ಚಿಗೆದ್ದ ಜನರು ಕರಡಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಪ್ರಜ್ಞೆತಪ್ಪಿದ ಕರಡಿಯನ್ನು ಜೆಸಿಬಿಯಲ್ಲಿ ಮೆರವಣಿಗೆ ಮಾಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಕರಡಿಯನ್ನು ಆಡುಮಲ್ಲೇಶ್ವರ ಕಿರುಮೃಗಾಲಯಕ್ಕೆ ತರಲಾಗಿತ್ತು. ತಲೆ ಹಾಗೂ ಬೆನ್ನ ಮೇಲೆ ಬಿದ್ದ ಹೊಡೆತದಿಂದ ಕರಡಿ ಚೇತರಿಸಿಕೊಂಡಿರಲಿಲ್ಲ. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವನ್ಯಜೀವಿ ಕಾಯ್ದೆಯ ನಿಯಮಾವಳಿಯ ಪ್ರಕಾರ ಸುಟ್ಟುಹಾಕಲಾಗಿದೆ. ಕರಡಿ ಹತ್ಯೆ ಮಾಡಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.