ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಹಿರೆಯಮ್ಮಿಗನೂರು ಗ್ರಾಮಸ್ಥರು ಕರಡಿ ಓಡಿಸಲು ಮರಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ತಗುಲಿ ಕರಡಿ ಗಾಯಗೊಂಡಿದೆ.
ಬುಧವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕರಡಿ ಕಾಣಿಸಿಕೊಂಡಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಮರವೇರಿದೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಬಂದು ರಕ್ಷಣೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಕೆಲ
ಗ್ರಾಮಸ್ಥರು ಕರಡಿ ಏರಿದ್ದ ಮರಕ್ಕೆ ಬೆಂಕಿ ಹಚ್ಚಿದ್ದಾರೆ. ಮರದ ಬುಡದ ಕೆಳಗೆ ಇದ್ದ ಪೊದೆಗಳು ಉರಿಯತೊಡಗಿವೆ. ಬೆಂಕಿ ಕಂಡು ಗಾಬರಿಗೊಂಡ ಕರಡಿ ಮರದ ತುದಿಗೆ ಏರಿದೆ. ಉದ್ದದ ಕೋಲಿಗೆ ಬೆಂಕಿ ಹಚ್ಚಿ ಕರಡಿಗೆ ತೂರಿದ್ದಾರೆ.
ಬೆಂಕಿ ತಗುಲಿ ಕರಡಿ ಪರದಾಡುವುದನ್ನು ಕಂಡು ಗ್ರಾಮಸ್ಥರು ಕೇಕೆ ಹಾಕಿದ್ದಾರೆ. ಬೆಂಕಿ ನಂದಿಸಿಕೊಂಡ ಕರಡಿ ಅಸ್ವಸ್ಥಗೊಂಡಿದೆ. ಇದನ್ನು ಗ್ರಾಮಸ್ಥರು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.