ಬೆಳಗಾವಿ: ಕಾಲ್ಪನಿಕ ವೇತನ ಬಡ್ತಿ ವಿಷಯದಲ್ಲಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳದ್ದನ್ನು ಖಂಡಿಸಿ ಬಿಜೆಪಿಯ ಕೆಲ ಸದಸ್ಯರು ಹಾಗೂ ಪುಟ್ಟಣ್ಣ ವಿಧಾನ ಪರಿಷತ್ನಲ್ಲಿ ಬುಧವಾರ ಸಭಾತ್ಯಾಗ ಮಾಡಿದರು.
ಬಡ್ತಿ ಕುರಿತು ಪುಟ್ಟಣ್ಣ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಅಧಿವೇಶನ ಮುಗಿಯುವುದರೊಳಗಾಗಿ ಬಡ್ತಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಅವರೊಂದಿಗೆ ಸಭೆ ಆಯೋಜಿಸಲಾಗುವುದು ಎಂದರು.
ಬಸವರಾಜ ಹೊರಟ್ಟಿ ಅಧ್ಯಕ್ಷತೆಯ ಸಮಿತಿ ಈ ಕುರಿತು ನೀಡಿರುವ ವರದಿಯನ್ನು ಸರ್ಕಾರ ಒಪ್ಪಿಕೊಳ್ಳುತ್ತದೆಯೇ ಎಂದು ಪುಟ್ಟಣ್ಣ ಪ್ರಶ್ನಿಸಿದರು. ಅದಕ್ಕೆ ಸಚಿವರಿಂದ ಸ್ಪಷ್ಟ ಉತ್ತರ ಸಿಗದಿದ್ದರಿಂದ ಅರುಣ ಶಹಾಪುರ, ನಾರಾಯಣ ಸ್ವಾಮಿ, ಎಸ್.ವಿ. ಸಂಕನೂರ ಮತ್ತಿತರರು ಹೊರ ನಡೆದರು.
ಇದಕ್ಕೂ ಮುನ್ನ ನಡೆದ ಎರಡು ಗಂಟೆಗಳ ಸುದೀರ್ಘ ಚರ್ಚೆಯಲ್ಲಿ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ, ಶರಣಪ್ಪ ಮಟ್ಟೂರ ಭಾಗವಹಿಸಿದ್ದರು.