ನವದೆಹಲಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮೂಲ ಅರ್ಜಿಯ ವಿಚಾರಣೆಯಿಂದ ಕರ್ನಾಟಕದವರಾದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹಿಂದೆ ಸರಿದಿದ್ದಾರೆ.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಂ.ಆರ್. ಶಾ ಹಾಗೂಎಸ್.ಅಬ್ದುಲ್ ನಜೀರ್ ಅವರಿದ್ದ ಪೀಠದೆದುರು ಪ್ರಕರಣದ ವಿಚಾರಣೆ ಮಂಗಳವಾರ ನಿಗದಿಯಾಗಿತ್ತು. ಆದರೆ, ಅಬ್ದುಲ್ ನಜೀರ್ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ವಿಚಾರಣೆ ನಡೆಯಲಿಲ್ಲ.
ಈ ಅರ್ಜಿಯ ವಿಚಾರಣೆ ಯನ್ನು ಅಬ್ದುಲ್ ನಜೀರ್ ಅವರನ್ನು ಹೊರತಾದ ಪೀಠಕ್ಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿಯವರ ಗಮನಕ್ಕೆ ತರಲಾಗುವುದು ಎಂದು ಪೀಠ ಹೇಳಿತು. 1956ರಲ್ಲಿ ಬೆಳಗಾವಿಯನ್ನು ಕರ್ನಾಟಕದ ಭಾಗ ಎಂದು ಗುರುತಿಸಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯು ವಿಚಾರಣೆಗೆ ಅರ್ಹವೇ ಎಂಬುದನ್ನು ಪರಿಶೀಲಿಸಿದ್ದ ನ್ಯಾಯಪೀಠ, 48 ವರ್ಷಗಳ ನಂತರ ಈ ಮೇಲ್ಮನವಿ ಸಲ್ಲಿಸಿದ್ದ ಮಹಾರಾಷ್ಟ್ರದ ನಿಲುವನ್ನು ಪ್ರಶ್ನಿಸಿತ್ತು.