ಬೆಳಗಾವಿ: ಮೀಸಲಾತಿ ಬಡ್ತಿಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ಆದ್ದರಿಂದ ಮುಂದಿನ ಆದೇಶ ನೀಡುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (ಡಿಪಿಎಆರ್) ನಿರ್ದೇಶನ ನೀಡಿರುವುದರಿಂದ ಮುಂಬಡ್ತಿ ಹಾಗೂ ಹಿಂಬಡ್ತಿ ನೀಡುತ್ತಿಲ್ಲ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ವಿಧಾನ ಪರಿಷತ್ನಲ್ಲಿ ಬುಧವಾರ ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮತ್ತು ಉದ್ಯೋಗ ತರಬೇತಿ ಮೀಸಲಾತಿ ನಿಯಮದಂತೆ ಮುಂಬಡ್ತಿ ಯಾಕೆ ನೀಡಿಲ್ಲ ಎಂಬ ರಘುನಾಥರಾವ್ ಮಲ್ಕಾಪುರೆ ಪ್ರಶ್ನೆಗೆ ಅವರು ಉತ್ತರಿಸಿದರು.
ಆಗ ಮಧ್ಯ ಪ್ರವೇಶಿಸಿದ ಅರುಣ ಶಹಾಪುರ, ‘ನನಗೆ ಗೊತ್ತಿರುವಂತೆ ನ್ಯಾಯಾಲಯ ಯಾವುದೇ ತಡೆ ನೀಡಿಲ್ಲ. ಆದರೂ, ಯಾಕೆ ಬಡ್ತಿ ನೀಡುತ್ತಿಲ್ಲ. ಉನ್ನತ ಹುದ್ದೆಗಳು ಖಾಲಿ ಇರುವುದರಿಂದ ಸರ್ಕಾರ ಪಾರ್ಶ್ವವಾಯು ಪೀಡಿತವಾಗಿದೆ’ ಎಂದು ಹೇಳಿದರು.
ಬಡ್ತಿ ಮೀಸಲಾತಿ ನೀಡದ್ದರಿಂದ ಬಹಳಷ್ಟು ಪ್ರಮುಖ ಹುದ್ದೆಗಳು ಖಾಲಿ ಉಳಿದಿವೆ. ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಮಲ್ಕಾಪುರೆ ದೂರಿದರು.
‘ಇಲಾಖೆ ನೀಡಿದ ನಿರ್ದೇಶನ ಪಾಲಿಸುತ್ತಿದ್ದೇವೆ’ ಎಂದು ಸಚಿವ ದೇಶಪಾಂಡೆ ಹೇಳಿದರು.