ರಾಮದುರ್ಗ (ಬೆಳಗಾವಿ): ಮಲಪ್ರಭಾ ನದಿ ಪ್ರವಾಹದಿಂದ ಸಂತ್ರಸ್ತರಾದ ಹಲಗತ್ತಿ ಗ್ರಾಮದ ನೇಕಾರ ರಮೇಶ ನೀಲಕಂಠಪ್ಪ ಹವಳಕೋಡ (38) ಶನಿವಾರ ತಡರಾತ್ರಿ ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ಪತ್ನಿ, ಪುತ್ರಿ ಇದ್ದಾರೆ. ಇತ್ತೀಚೆಗೆ ಉಂಟಾದ ಪ್ರವಾಹದಿಂದ ಹಲಗತ್ತಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿ ನೇಕಾರ ರಮೇಶ ಅವರ ಮನೆ ಬಿದ್ದು, ವಿದ್ಯುತ್ ಮಗ್ಗಕ್ಕೆ ಅಪಾರ ಹಾನಿಯಾಗಿತ್ತು. ತಿಂಗಳು ಕಳೆದರೂ ಸರ್ಕಾರದಿಂದ ಪರಿಹಾರ ದೊರಕದೆ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.