ಬೆಂಗಳೂರು:ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಂಟಿ ಪ್ರಚಾರ ನಡೆಸಲಿದ್ದಾರೆ.
ತಮ್ಮ ಒಂದು ಕಾಲದ ಶಿಷ್ಯ, ಬಳಿಕ ಕಡುವಿರೋಧಿಯಾಗಿದ್ದ ಬಳ್ಳಾರಿ ಕ್ಷೇತ್ರದ ಮೈತ್ರಿ ಕೂಟದ ಅಭ್ಯರ್ಥಿ ಕಾಂಗ್ರೆಸ್ನ ವಿ.ಎಸ್. ಉಗ್ರಪ್ಪ ಪರ ಇದೇ 29ರಂದು ದೇವೇಗೌಡರು ಮತ ಯಾಚಿಸಲಿದ್ದಾರೆ. ಕೂಡ್ಲಿಗಿಯಲ್ಲಿ ನಡೆಯಲಿರುವ ಈ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಲಿದ್ದಾರೆ.
ಇದೇ 30ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಜೆಡಿಎಸ್ನ ಮಧು ಬಂಗಾರಪ್ಪ ಪರ ಮತಯಾಚಿಸಲು ಏರ್ಪಡಿಸಿರುವ ಬೃಹತ್ ಸಮಾವೇಶದಲ್ಲಿ ದೇವೇಗೌಡ, ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.
ಇದೇ 28 ಹಾಗೂ 31ರಂದು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ತಮ್ಮ ಸೊಸೆ ಅನಿತಾ ಕುಮಾರಸ್ವಾಮಿ ಪರವಾಗಿ ಗೌಡರು ಪ್ರಚಾರ ಮಾಡಲಿದ್ದಾರೆ.