ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಬುಧವಾರ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣಕ್ಕೆ ಭೇಟಿ ನೀಡಿದ್ದರು.
ಕೊಚ್ಚಿನ್ನಿಂದ ವಿಶೇಷ ವಿಮಾನದಲ್ಲಿ ಬಂದ ಅವರನ್ನು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ ಶಾಲು ಹೊದಿಸಿ, ಪುಷ್ಪ ನೀಡಿ ಬರಮಾಡಿಕೊಂಡರು.
ಮುಂಬೈ ಕರ್ನಾಟಕ ಭಾಗದಲ್ಲಿ ಚುನಾವಣಾ ಸಿದ್ಧತೆ ಕುರಿತು ಸಂಕ್ಷಿಪ್ತ ಮಾಹಿತಿ ಪಡೆದರು. ಈ ಭಾಗದ ಏಳೂ ಕ್ಷೇತ್ರಗಳಲ್ಲೂ ಗೆಲ್ಲುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.
‘ಇಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಅದ್ಧೂರಿ ಮೆರವಣಿಗೆ ನಡೆಯುತ್ತದೆ. ಅದರಲ್ಲಿ ನೀವು ಭಾಗವಹಿಸಬೇಕು’ ಎಂದು ಕೋರೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾ, ‘ಭದ್ರತೆ ಕಾರಣದಿಂದ ಮೆರವಣಿಗೆಗೆ ಈಗ ಬರಲಾಗುವುದಿಲ್ಲ. ಸಮಾಜದ ಮುಖಂಡರನ್ನು ಇಲ್ಲಿಗೆ ಆಹ್ವಾನಿಸಿದರೆ ಶುಭಾಶಯ ಕೋರುತ್ತೇನೆ’ ಎಂದು ತಿಳಿಸಿದರು.
ಹೆಲಿಕಾಪ್ಟರ್ನಲ್ಲಿ ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿ ವಾಪಸಾದ ಅವರು, ಸಮಯದ ಅಭಾವದಿಂದಾಗಿ ವಿಶೇಷ ವಿಮಾನದಲ್ಲಿ ಸಾಂಬ್ರಾದಿಂದ ತೆರಳಿದರು. ಇದರಿಂದಾಗಿ ಜೈನ ಸಮಾಜದ ಮುಖಂಡರ ಭೇಟಿ ಸಾಧ್ಯವಾಗಲಿಲ್ಲ. ಸಮಾಜದವರು ಅವರನ್ನು ರನ್ವೇ ಬಳಿ ಭೇಟಿಯಾಗಲು ಪೊಲೀಸರು ಅವಕಾಶ ಕೊಡಲಿಲ್ಲ ಎಂದು ಮೂಲಗಳು ತಿಳಿಸಿವೆ.