ಮೈಸೂರು: ‘ಎಚ್.ಡಿ.ಕುಮಾರಸ್ವಾಮಿಅವರೇ ನನ್ನನ್ನು ಬಿಜೆಪಿ ಜತೆ ಕಳುಹಿಸಿದ್ದಾರೆ. ಅವರು ಕೊಟ್ಟಿರುವ ಕೆಲಸ ಮಾಡುತ್ತಿದ್ದೇನೆ’ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಭಾನುವಾರ ಇಲ್ಲಿ ವ್ಯಂಗ್ಯವಾಡಿದರು.
ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ.
‘ದಸರಾ ಮಾಡಲು ಕುಮಾರಸ್ವಾಮಿ ನನ್ನನ್ನು ಕಳುಹಿಸಿದ್ದಾರೆ. ಲೋಕಸಭೆ ಚುನಾವಣೆ ವೇಳೆಯೂ ಅವರೇ ನನ್ನನ್ನು ಬಿಜೆಪಿ ಜತೆ ಕಳುಹಿಸಿದ್ದರು’ ಎಂದು ಮಾಧ್ಯಮದವರಿಗೆ ತಿಳಿಸಿದರು.
ಜಿ.ಟಿ.ದೇವೇಗೌಡರು ಪಕ್ಷದ ಪ್ರಶ್ನಾತೀತ ನಾಯಕರು ಎಂಬ ಸಾ.ರಾ.ಮಹೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಸಾ.ರಾ.ಮಹೇಶ್ ಇನ್ನೂ ಯುವಕರು. ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಲಿ. ಕುಮಾರಣ್ಣ ಬಿಟ್ಟರೆ ಈ ರಾಜ್ಯದಲ್ಲಿ ಅವರೇ ನಾಯಕರು. ಅವರಿಗೆ ಭವಿಷ್ಯ ಇದೆ’ ಎಂದು ಅವರು ಲೇವಡಿ ಮಾಡಿದರು.