ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್ಕೆಆರ್ಡಿಬಿ)ಯ 2019–20ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಮೀಸಲಿಟ್ಟ ಮುಖ್ಯಮಂತ್ರಿ ವಿವೇಚನಾ ನಿಧಿಯನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಮಾತ್ರ ಹಂಚಿಕೆ ಮಾಡಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಒಟ್ಟು ₹75 ಕೋಟಿ ನಿಧಿಯಲ್ಲಿ ಅನರ್ಹ ಶಾಸಕರ ಮಸ್ಕಿ ಹಾಗೂ ವಿಜಯನಗರ ಕ್ಷೇತ್ರಗಳಿಗೆ ಅತಿಹೆಚ್ಚು, ತಲಾ ₹11 ಕೋಟಿ ಕೊಟ್ಟಿದ್ದಾರೆ.
ರಾಯಚೂರು ನಗರ ಕ್ಷೇತ್ರಕ್ಕೆ ₹4 ಕೋಟಿ ಹಾಗೂ ಈ ಭಾಗದ ಇನ್ನುಳಿದ 16 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹3 ಕೋಟಿ ಅನುದಾನವನ್ನು ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಹಂಚಿಕೆ ಮಾಡಿ, ಜುಲೈ 18, 2019 ರಂದು ಹೊರಡಿಸಿದ್ದ ಆದೇಶವನ್ನು ಯಡಿಯೂರಪ್ಪ ರದ್ದು ಪಡಿಸಿದ್ದಾರೆ.