ಬೆಂಗಳೂರು: ಬೈಕ್ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟ ರೈತ ರಾಜು (39),ದೀರ್ಘಕಾಲಿಕ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ಎಡಭಾಗದ ಮೂತ್ರಪಿಂಡ ದಾನ ಮಾಡಿ ಜೀವ ಉಳಿಸಿದ್ದಾರೆ.
ಅಲ್ಲದೇ, ಬಲಭಾಗದ ಮೂತ್ರಪಿಂಡ, ಯಕೃತ್ತು, ಶ್ವಾಸಕೋಶ, ಹೃದಯಕವಾಟ ಮತ್ತು ಕಾರ್ನಿಯಾಗಳನ್ನು ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ದಾನ ಮಾಡಿ ಆರುಜನರಿಗೆ ಹೊಸಬಾಳು ನೀಡಿದ್ದಾರೆ.
ಅಂಗಾಂಗ ದಾನ ಮತ್ತು ಕಸಿ ಪ್ರಕ್ರಿಯೆಯನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ಜೀವ ಸಾರ್ಥಕತೆ’ (ಕರ್ನಾಟಕ ಕಸಿ ಪ್ರಾಧಿಕಾರ) ಸಹಯೋಗದಲ್ಲಿ ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು.
ರಾಜು, ಮಂಡ್ಯದ ತಟ್ಟಹಳ್ಳಿಯವರು. ಫೆ.17ರಂದು ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಅವರು ಗಾಯಗೊಂಡಿದ್ದರು. ಯಶವಂತಪುರದಸ್ಪರ್ಶ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅಂಗಾಂಗ ದಾನಕ್ಕೆ ಅವರ ಕುಟುಂಬ ಒಪ್ಪಿಗೆ ನೀಡಿದ ಬಳಿಕ ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.