ನವದೆಹಲಿ:ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆದಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಹೇಳಿಕೆಯನ್ನು ಶಾಸಕರ ಅನರ್ಹತೆ ಪ್ರಕರಣದಲ್ಲಿ ದಾಖಕೆಯಾಗಿ ಪರಿಗಣಿಸುವಂತೆ ಕೋರಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದೆ.
ಮಂಗಳವಾರ ಬೆಳಿಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠವು ಮನವಿಯ ಕುರಿತು ಪರಿಶಿಲಿಸಲಾಗುವುದು ಎಂದು ಹೇಳಿತು.
ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಆಲಿಸಿದ ಪೀಠವು, ಈಗಾಗಲೇ ನಡೆದ ವಿಚಾರಣೆ ವೇಳೆ ಇದೇ ಅಂಶ ಇರುವ ವಾದ ಮಂಡಿಸಲಾಗಿದೆ. ತೀರ್ಪು ಕಾದಿರಿಸಲಾಗಿದೆ ಎಂದು ತಿಳಿಸಿತು.
ಪ್ರಕರಣದ ಸಮಗ್ರ ವಿಚಾರಣೆ ಮುಕ್ತಾಯವಾಗಿದ್ದು, ಯಡಿಯೂರಪ್ಪ ಅವರ ಹೇಳಿಕೆ ಇರುವ ಆಡಿಯೊವನ್ನು ದಾಖಲೆಯಾಗಿ ಪರಿಗಣಿಸಲಾಗುವುದೇ ಇಲ್ಲವೇ ಎಂಬ ಕುರಿತು ನ್ಯಾಯ ಪೀಠ ಏನನ್ನೂ ಸ್ಪಷ್ಟಪಡಿಸಲಿಲ್ಲ.
‘ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿದ್ದ ಆದೇಶ ಸರಿ ಎಂದು ವಾದ ಮಂಡಿಸಿರುವ ನೀವು ಹಲವು ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದೀರಿ. ಮುಂಬೈಗೆ ಬಿಜೆಪಿಯೇ ಎಲ್ಲ ಶಾಸಕರನ್ನೂ ಕರೆದೊಯ್ದಿತ್ತು ಎಂದೂ ವಾದಿಸಿದ್ದೀರಿ. ಅದೆಲ್ಲವನ್ನೂ ನಾವು ದಾಖಲಿಸಿಕೊಂಡಿದ್ದೇವೆ’ ಎಂದು ಕಾಂಗ್ರೆಸ್ ಪರ ವಕೀಲರಿಗೆ ಪೀಠ ಹೇಳಿತು.