ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಐಎನ್ಎಸ್ ಮಾಧ್ಯಮ ಸಂಸ್ಥೆಯ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿ ಅವರು ಜೈಲಿನಲ್ಲಿ ಅಸ್ವಸ್ಥಗೊಂಡು ಶನಿವಾರ ಇಲ್ಲಿನ ಬೈಕುಲ್ಲಾದ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದ್ರಾಣಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶೀನಾ ಅವರನ್ನು 2012ರ ಏಪ್ರಿಲ್ 24ರಂದು ಕೊಲೆ ಮಾಡಿ, ಸಮೀಪದ ರಾಯಗಡ ಅರಣ್ಯದಲ್ಲಿ ದೇಹವನ್ನು ಮಾರನೆಯ ದಿನ ಸುಟ್ಟುಹಾಕಲಾಗಿದೆ ಎಂದು ಪೊಲೀಸರು ಆರೋಪಿಸಿದ್ದರು. ಶೀನಾ ಅವರ ಸಹೋದರ ಮಿಖಾಯಿಲ್ ಬೋರಾ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಇಂದ್ರಾಣಿ ಮತ್ತು ಸಂಜೀವ್ ಖನ್ನಾ ವಿರುದ್ಧ ಹೊರಿಸಲಾಗಿತ್ತು.
ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿ ಇಂದ್ರಾಣಿ ಅವರು ಜೈಲು ಶಿಕ್ಷೆ ಎದುರಿಸುತ್ತಿದ್ದಾರೆ.