ಶಿವಮೊಗ್ಗ: ಹಣ, ಹೆಂಡ ಹಂಚುವ ಮೂಲಕ ಬಳ್ಳಾರಿ, ಜಮಖಂಡಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಶಿವಮೊಗ್ಗದಲ್ಲೂ ಅಂತಹ ಪ್ರಯತ್ನ ನಡೆಸಿದರೂ ಮತದಾರರು ಮನ್ನಣೆ ನೀಡಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.
ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ, ಪುತ್ರ ರಾಘವೇಂದ್ರ ಗೆಲುವು ಸಾಧಿಸಿದ ನಂತರ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಉಪಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆ. ಆಯಾ ಕ್ಷೇತ್ರಗಳ ಸ್ಥಳೀಯ ಮುಖಂಡರ ಜತೆ ಚರ್ಚಿಸಿ ಸೋಲಿನ ಆತ್ಮವಲೋಕನ ನಡೆಸಲಾಗುವುದು. ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆಗೆ ಪಕ್ಷ ಸದೃಢಗೊಳಿಸಲಾಗುವುದು. ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇದೇ ಮೊದಲ ಬಾರಿ ಎರಡೂವರೆ ಲಕ್ಷ ಮತಗಳನ್ನು ಪಡೆದಿದ್ದಾರೆ. ಇದುಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ತಂದಿದೆ. ಅಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ಪ್ರೇರೇಪಣೆ ನೀಡಿದೆಎಂದರು.
ಸಮ್ಮಿಶ್ರ ಸರ್ಕಾರದ ಇಡೀ ತಂಡ ಶಿವಮೊಗ್ಗಕ್ಕೆ ಬಂದು ಠಿಕಾಣಿ ಹೂಡಿದರೂ ಮತದಾರರು ಬಿಜೆಪಿ ಕೈಬಿಟ್ಟಿಲ್ಲ. ಇದು ಕಾರ್ಯಕರ್ತರ ಪರಿಶ್ರಮದ ಗೆಲುವು. ಗೆಲುವಿನ ಅಂತರ ಇನ್ನಷ್ಟು ಹೆಚ್ಚಾಗಬೇಕಿತ್ತು ಎಂದು ವಿಶ್ಲೇಷಿಸಿದರು.