ಉಡುಪಿ: ಮಲ್ಪೆಯಿಂದ ನಾಪತ್ತೆಯಾಗಿರುವ ಬೋಟ್ನ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ ಎಂಬ ಗೃಹಸಚಿವ ಎಂ.ಬಿ.ಪಾಟೀಲರ ಹೇಳಿಕೆ ಮೀನುಗಾರರಲ್ಲಿ ಆಶಾಭಾವ ಹುಟ್ಟುಹಾಕಿದೆ. ಮೀನುಗಾರರು ಮರಳಿ ಬರಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
ಶುಕ್ರವಾರ ಮಲ್ಪೆ ಬಂದರು ಹಾಗೂ ಮೀನು ಮಾರುಕಟ್ಟೆಯಲ್ಲಿ ಗೃಹಸಚಿವರ ಹೇಳಿಕೆ ಕುರಿತು ಬಿಸಿ–ಬಿಸಿ ಚರ್ಚೆ ನಡೆಯಿತು. ಬೋಟ್ ಎಲ್ಲಿದೆ ಎಂದು ಗೊತ್ತಾಗಿದೆಯಂತೆ, ಮೀನುಗಾರರು ಸುರಕ್ಷಿತವಾಗಿ ವಾಪಸ್ ಬರುತ್ತಾರಂತೆ ಎಂದು ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.
ಈ ಕುರಿತು ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ‘ಬೋಟ್ ಬಗ್ಗೆ ಸುಳಿವು ಸಿಕ್ಕಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ, ಮೀನುಗಾರರ ಪರಿಸ್ಥಿತಿ ಏನಾಗಿದೆ ಎಂದು ತಿಳಿಸುತ್ತಿಲ್ಲ. ರಾಜ್ಯ ಸರ್ಕಾರ ಮೊದಲು ಮೀನುಗಾರರ ಆತಂಕ ದೂರ ಮಾಡಬೇಕು’ ಎಂದು ಒತ್ತಾಯಿಸಿದರು.
ಮೂಲಗಳ ಪ್ರಕಾರ ಬೋಟ್ನಲ್ಲಿ ಬಳಸುವ ಥರ್ಮಾಕೋಲ್ ಸುಟ್ಟಸ್ಥಿತಿಯಲ್ಲಿ ಸಿಕ್ಕಿದೆ ಎನ್ನಲಾಗುತ್ತಿದೆ. ಒಂದುವೇಳೆ ಬೋಟ್ ದುರಂತಕ್ಕೀಡಾಗಿದ್ದರೆ, ಇತರ ವಸ್ತುಗಳು ಸಿಗಬೇಕಿತ್ತು. ಥರ್ಮಾಕೋಲ್ ಮಾತ್ರ ಸಿಕ್ಕಿದೆ ಎಂದರೆ ನಂಬುವುದು ಕಷ್ಟ ಎಂಬ ವಾದ ಮುಂದಿಟ್ಟರು.
ಪತ್ತೆಗೆ ತೆರಳಿದ 2 ಬೋಟ್:
ಶುಕ್ರವಾರ ಮಧ್ಯಾಹ್ನ ಮಲ್ಪೆ ಬಂದರಿನಿಂದ ಮಹಾರಾಷ್ಟ್ರ ಹಾಗೂ ಗೋವಾ ಕಡೆಗೆ 2 ಬೋಟ್ಗಳು ತೆರಳಿದ್ದು, ಶೋಧ ನಡೆಸಲಾಗುತ್ತಿದೆ. 25 ಮೀನುಗಾರರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಶೋಧ ಕಾರ್ಯಾಚರಣೆಗೆ ಶ್ರಮಿಸಲಾಗುತ್ತಿದೆ ಎಂದು ಕುಂದರ್ ತಿಳಿಸಿದರು.