ಬೆಂಗಳೂರು: ‘ಬಸ್ ಪ್ರಯಾಣ ದರ ಶೇ 20ರಷ್ಟು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇದೆ. ಉನ್ನತ ಮಟ್ಟದಲ್ಲಿ ಚರ್ಚೆಯಾದ ಬಳಿಕವಷ್ಟೇ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಬಿ.ಬಸವರಾಜುಅವರು ಶನಿವಾರ ಮಾಹಿತಿ ನೀಡಿದರು.
‘ಚುನಾವಣೆಗೂ ಮುನ್ನವೇ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿಗಮಗಳು ಪ್ರಯಾಣ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ಈಗ ಚುನಾವಣೆ ಮುಗಿದಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರವಷ್ಟೇ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ’ ಎಂದರು.
‘ಕಳೆದ ಏಳು ವರ್ಷದಿಂದ ದರ ಹೆಚ್ಚಳ ಮಾಡಿಲ್ಲ. ಆದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಪ್ರತಿ ವರ್ಷವೂ ಗಣನೀಯವಾಗಿ ಏರಿಕೆಯಾಗಿವೆ. ಅಲ್ಲದೇ, ನಾಲ್ಕು ವರ್ಷಕ್ಕೊಮ್ಮೆ ಸಿಬ್ಬಂದಿ ವೇತನ ಹೆಚ್ಚಳ ಮಾಡುತ್ತಿರುವುದರಿಂದಾಗಿ ಆ ವೆಚ್ಚವೂ ಹೆಚ್ಚಳವಾಗುತ್ತಿದ್ದು, ಇದು ಶೇ 12ರಿಂದ ಶೇ 13ರಷ್ಟಿದೆ’ ಎಂದರು.
‘ಸಾರಿಗೆ ನಿಗಮಗಳು ನಷ್ಟದಲ್ಲಿ ಸಿಲುಕುವ ಹಂತ ತಲುಪಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು’ ಎಂದರು.