ಚಿಕ್ಕಮಗಳೂರು: ‘ಹತ್ತಾರು ಬಗೆಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಅವಕಾಶ ಇದೆ ಎಂದು ಎಫ್ಕೆಸಿಸಿಐ ಸಂವಾದದಲ್ಲಿ ಪ್ರಶ್ನೆಗೆ ಉತ್ತರಿಸಿದ್ದೆ, ಪ್ರವಾಸೋದ್ಯಮ ಆಕರ್ಷಣೆಯ ಹತ್ತಾರು ಅಂಶಗಳಲ್ಲಿ ಕ್ಯಾಸಿನೂ ಕೂಡಾ ಒಂದು ಹೇಳಿದ್ದೆ. ಕ್ಯಾಸಿನೊ ಸೆಂಟರ್ (ಜೂಜು ಕೇಂದ್ರ) ಮಾಡುತ್ತೇವೆ ಎಂದು ಹೇಳಿಲ್ಲ’ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂವಾದದಲ್ಲಿ ಗೋವಾ ಬಗ್ಗೆ ಪ್ರಸ್ತಾಪ ಬಂತು. ಗೋವಾ ಪಬ್ ಮತ್ತು ಕ್ಲಬ್ ಪ್ರಸಿದ್ಧಿಯಾಗಿದೆ. ಅದೇ ರೀತಿ ಶ್ರೀಲಂಕಾ, ಹಾಂಕಾಂಗ್, ಸಿಂಗಪುರ, ಥಾಯ್ಲೆಂಡ್, ಲಾಸ್ವೆಗಾಸ್ಗಳು ಕ್ಯಾಸಿನೊದಿಂದ ಪ್ರವಾಸೋದ್ಯಮವನ್ನು ಆಕರ್ಷಿಸಿವೆ. ಶ್ರೀಲಂಕಾಕ್ಕೆ ಭಾರತದ, ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ, ಗೋವಾಕ್ಕೆ ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ ಎಂಬುದನ್ನು ಪಟ್ಟಿ ಮಾಡಿದರೆ ನನ್ನ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದು ಅರ್ಥವಾಗುತ್ತದೆ’ ಎಂದು ಉತ್ತರಿಸಿದರು.
‘ಲಾಸ್ವೆಗಾಸ್ ನಗರದಲ್ಲಿ ವಿಮಾನ ದಟ್ಟಣೆ ಹೆಚ್ಚು ಇದೆ. ಲಾಸ್ವೆಗಾಸ್ಗೆ ಹೋಗುವುದೇ ಜೂಜಾಡಲು, ಮನರಂಜನೆಗಾಗಿ ಎಂಬುದು ವಾಸ್ತವ ಸತ್ಯ. ಇದರಿಂದ ಅಲ್ಲಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ಶ್ರೀಲಂಕಾ ಪ್ರವಾಸಿಗರ ತಾಣವಾಗಲೂ ಇದೇ ಕಾರಣ. ಎಫ್ಕೆಸಿಸಿಐ ಸಂವಾದದ ಪೂರ್ಣ ವಿಡಿಯೋ ನೋಡಿದರೆ ನಿಜಾಂಶ ಗೊತ್ತಾಗುತ್ತದೆ’ ಎಂದರು.
‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧ ಚಳವಳಿಯ ಹಿಂದೆ ದೇಶ ಒಡೆಯುವ ಸಂಚು ಇದೆ. ಇದು ದುರುದ್ದೇಶದ ಹೋರಾಟ, ಅದರ ವಿರುದ್ಧ ಜನರು ಬೀದಿಗಿಳಿಯಬೇಕು. ದೇಶದ್ರೋಹದ ಚಟುವಟಿಕೆಗೆ ಕ್ಷಮೆ, ಸಹಾನುಭೂತಿ ಇರಬಾರದು. ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗುವುದು, ಅಸ್ಸಾಂ ತುಂಡರಿಸಬೇಕು ಎನ್ನುವುದು ದೇಶಭಕ್ತಿಯೇ? ಇದು ತುಕ್ಡೆ ಗ್ಯಾಂಗುಗಳು ಮಾಡುವ ಕೆಲಸ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟುಮಾಡುವುದು ಅವರ ಉದ್ದೇಶ’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.