ಮೈಸೂರು: ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆಯಾಗಿಲ್ಲ. ಎಡ, ಬಲ ಸಮುದಾಯಗಳಲ್ಲಿನ ಪ್ರಾತಿನಿಧ್ಯ ಸರಿಪಡಿಸಿದ್ದಾರೆ. ಆದರೆ, ಸಾಧು ಲಿಂಗಾಯತರಿಗೆ ಸ್ಥಾನ ಕೊಡದೆ ಅನ್ಯಾಯ ಮಾಡಿದ್ದಾರೆ’ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಅವರನ್ನು ನಂಬಿದ್ದು ನಿಜ. ಆದರೆ, ಅವರು ನಮ್ಮ ಕೈ ಹಿಡಿಯಲಿಲ್ಲ. ಮೈತ್ರಿ ಸರ್ಕಾರದಲ್ಲಿ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಅತೃಪ್ತ ಶಾಸಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ’ ಎಂದರು.
‘6 ಮಂದಿ ಮುಸ್ಲಿಂ ಶಾಸಕರಲ್ಲಿ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. 16 ಮಂದಿ ಲಿಂಗಾಯತರು ಗೆದ್ದಿದ್ದರೂ ಕೇವಲ ಮೂವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿಜೆಪಿ ಬೆಂಬಲಿಸುವಂತೆ ಬಂದಿದ್ದ ದೂರವಾಣಿ ಕರೆಯನ್ನು ರೆಕಾರ್ಡ್ ಮಾಡಿ ಬಹಿರಂಗಪಡಿಸಿದ್ದೆ. ಅದಕ್ಕೆ ಕೊಡುಗೆ ನೀಡುವ ಬದಲು ಶಿಕ್ಷೆ ಕೊಟ್ಟಿದ್ದಾರೆ’ ಎಂದು ಹೇಳಿದರು.