ಬೆಂಗಳೂರು: ಬ್ಯಾಲಕೆರೆ ಸಮೀಪದ ಕಾಳತಮ್ಮನಹಳ್ಳಿಯಲ್ಲಿ ಗುರುವಾರ ಕ್ಯಾಟ್ಫಿಶ್ ಸಾಕಾಣಿಕೆ ಕೇಂದ್ರದ ಮೇಲೆ ದಾಳಿ ನಡೆಸಿದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಆ ಮೀನುಗಳನ್ನು ನಾಶಪಡಿಸಿದರು.
ಕೊಂಡಶೆಟ್ಟಿಹಳ್ಳಿಯ ನಾರಾಯಣ ಮೂರ್ತಿ ಹಾಗೂ ಮಧುಗಿರಿಹಳ್ಳಿಯ ಚಂದ್ರು ಎಂಬುವವರು, ನೀಲಗಿರಿ ತೋಪಿನ ನಡುವೆ ಆರು ಹೊಂಡ ತೆಗೆದು ಕ್ಯಾಟ್ಫಿಶ್ ಸಾಕಾಣಿಕೆ ಮಾಡುತ್ತಿದ್ದರು.
‘ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಮೀನುಗಳಿಗೆ ಆಹಾರವಾಗಿ ನೀಡಲಾಗುತ್ತಿತ್ತು. ಬೆಳೆದ ಮೀನುಗಳನ್ನು ಬೆಂಗಳೂರು ಮಾತ್ರವಲ್ಲದೇ ಮುಂಬೈ, ಕೇರಳ, ತಮಿಳುನಾಡಿಗೆ ಸಾಗಿಸುತ್ತಿದ್ದರು. ಪಶ್ಚಿಮ ಬಂಗಾಳದಿಂದ ಕ್ಯಾಟ್ಫಿಶ್ಗಳ ಮರಿಗಳನ್ನು ತಂದು ಸಾಕುತ್ತಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.
‘ಹೊಂಡದಲ್ಲಿರುವ ಇತರೆ ಮೀನುಗಳನ್ನು ತಿನ್ನುವ ಕಾರಣದಿಂದಾಗಿ ಕ್ಯಾಟ್ಫಿಶ್ ಸಾಕಾಣಿಕೆಯನ್ನು ನಿರ್ಬಂಧಿಸಲಾಗಿದೆ. ಈ ಕುರಿತು ನಾರಾಯಣಮೂರ್ತಿ ಹಾಗೂ ಚಂದ್ರು ಅವರಿಗೆ ಅರಿವು ಮೂಡಿಸಲಾಗಿದ್ದು, ಈ ವ್ಯವಹಾರದಲ್ಲಿ ತೊಡಗದಂತೆ ಎಚ್ಚರಿಕೆಯನ್ನೂ ನೀಡಿದ್ದೇವೆ’ ಎಂದು ಮಾಹಿತಿ ನೀಡಿದರು.