ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ 6 ಮತ್ತು 7ರಂದು ನವದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ, ಮುಂದಿನ ಶುಕ್ರವಾರದವರೆಗೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
ಸೋಮವಾರ ರಾತ್ರಿ ದೆಹಲಿಗೆ ತೆರಳಲಿರುವ ಅವರು, ಅಲ್ಲೇ ವಾಸ್ತವ್ಯ ಹೂಡುವರು. ಮಾರನೇ ದಿನ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಯಡಿಯೂರಪ್ಪ ಭೇಟಿಯಾಗಲಿದ್ದಾರೆ.
ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಜತೆ ಮಂಗಳವಾರ ಸಂಜೆ ಸಭೆ ನಡೆಸಲಿದ್ದು, ರಾಜ್ಯಕ್ಕೆ ಬೇಕಾಗಿರುವ ನೆರವು ನೀಡುವಂತೆ ಕೋರಲಿದ್ದಾರೆ.
ಆ.9ರ ಶುಕ್ರವಾರ ಸಂಪುಟ ವಿಸ್ತರಣೆ ಪ್ರಕ್ರಿಯೆ ನಡೆಯಬಹುದು ಎಂದು ಮೂಲಗಳು ವಿವರಿಸಿವೆ.