ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚಕ ಕಂಪನಿಗಳಿಗೆ ‘ಎಫ್‌ಐಯು’ ಲಗಾಮು!

ಐದು ವರ್ಷಗಳಲ್ಲಿ ₹ 5,200 ಕೋಟಿ ವಂಚನೆ l ತ್ವರಿತ ತನಿಖೆಗೆ ಸಿಐಡಿಯಲ್ಲೇ ಹೊಸ ಠಾಣೆ
Last Updated 21 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಸೈಟು, ಫ್ಲ್ಯಾಟು, ಹಣ ಹೂಡಿದರೆ ಅಧಿಕ ಬಡ್ಡಿ... ಹೀಗೆ, ಹಲವು ಆಮಿಷಗಳನ್ನು ಒಡ್ಡಿ ಸಾರ್ವಜನಿಕರಿಗೆ ವಂಚಿಸುವ ಕಂಪನಿಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದಲ್ಲಿ ಪ್ರತ್ಯೇಕ ‘ಎಫ್‌ಐಯು ಠಾಣೆ’ (ಫೈನಾನ್ಶಿಯಲ್ ಇನ್ವೆಸ್ಟಿಗೇಷನ್ ಯೂನಿಟ್ ಸ್ಟೇಷನ್) ಪ್ರಾರಂಭಿಸಲು ನಿರ್ಧರಿಸಿರುವ ಪೊಲೀಸ್ ಇಲಾಖೆ, ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

2013ರಿಂದ 2018ರ (ಸೆಪ್ಟೆಂಬರ್‌ವರೆಗೆ) ಅವಧಿಯಲ್ಲಿ ಬಹುಕೋಟಿ ವಂಚನೆ ಸಂಬಂಧ ರಾಜ್ಯದಾದ್ಯಂತ 16 ಕಂಪನಿಗಳ ವಿರುದ್ಧ 480 ಪ್ರಕರಣಗಳು ದಾಖಲಾಗಿವೆ. ಈ ಕಂಪನಿಗಳು 18 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಬರೋಬ್ಬರಿ ₹ 5,200 ಕೋಟಿ ದೋಚಿವೆ. ಹೀಗಾಗಿ, ಭವಿಷ್ಯದಲ್ಲಿ ಇಂಥ ಕಂಪನಿಗಳ ವ್ಯವಹಾರದ ಮೇಲೆ ನಿಗಾ ಇಡಲು ಪೊಲೀಸರಿಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿರುವ ಇಲಾಖೆ, ಹೂಡಿಕೆದಾರರು ನೇರವಾಗಿ ಸಿಐಡಿಗೇ ದೂರು ಕೊಡುವಂಥ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ವಂಚಕ ಕಂಪನಿಗಳ ವಿರುದ್ಧ ಆನ್‌ಲೈನ್ ಮೂಲಕ ದೂರು ಕೊಡಲು ಆರ್‌ಬಿಐ ‘sachet’ ಎಂಬ ಪೋರ್ಟಲ್ ಪ್ರಾರಂಭಿಸಿದೆ. ಅಲ್ಲಿ ಸಲ್ಲಿಕೆಯಾಗುವ ದೂರುಗಳು ಡಿಜಿಪಿ ಕಚೇರಿಗೆ ವರ್ಗವಾಗುತ್ತವೆ. ಕಂಪನಿ ಇರುವ ಸ್ಥಳದ ಆಧಾರದ ಮೇಲೆ ಆ ದೂರು ಡಿಜಿಪಿ ಕಚೇರಿಯಿಂದ ಸಂಬಂಧಪಟ್ಟ ಠಾಣೆಗೆ ಹೋಗುತ್ತದೆ. ಸ್ಥಳೀಯ ಪೊಲೀಸರು ನಾಲ್ಕೈದು ತಿಂಗಳು ತನಿಖೆ ನಡೆಸಿದರೂ ಪ್ರಗತಿ ಕಾಣದಿದ್ದಾಗ, ಸರ್ಕಾರ ಕೊನೆಯ ಆಯ್ಕೆಯಾಗಿ ಸಿಐಡಿಗೆ ವರ್ಗಾಯಿಸುತ್ತದೆ’ ಎಂದು ವಿವರಿಸಿದರು.

‘sachet ಬದಲು ಸ್ಥಳೀಯ ಠಾಣೆಗೆ ದೂರು ಕೊಟ್ಟರೂ, ಪ್ರಕರಣದ ಕಡತ ಇದೇ ಹಾದಿಯಲ್ಲಿ ಕಚೇರಿಯಿಂದ ಕಚೇರಿಗೆ ವಿಲೇವಾರಿ ಆಗುತ್ತದೆ. ಒಂದು ಗಂಭೀರ ಪ್ರಕರಣ ಇಷ್ಟೆಲ್ಲ ಹಂತಗಳನ್ನು ದಾಟಿ ಸಿಐಡಿ ತಲುಪುವಷ್ಟರಲ್ಲಿ ಕಂಪನಿಗಳ ಮಾಲೀಕರು ಎಚ್ಚೆತ್ತುಕೊಳ್ಳುತ್ತಾರೆ.’

‘ಹೂಡಿಕೆದಾರ ಮೊದಲ ದೂರು ಕೊಟ್ಟಾಗಲೇ ಮಾಲೀಕರು ಒಂದು ಕಡೆಯಿಂದ ಎಲ್ಲ ಸಾಕ್ಷ್ಯಗಳನ್ನೂ ನಾಶಪಡಿಸುತ್ತಾ ಬರುತ್ತಾರೆ. ಜತೆಗೆ, ವಂಚನೆ ಹಣದಲ್ಲಿ ಖರೀದಿ ಮಾಡಿದ ಆಸ್ತಿಗಳನ್ನೂ ಮಾರಿಬಿಡುತ್ತಾರೆ. ಇದರಿಂದ ಆರೋಪಿಯನ್ನು ಬಂಧಿಸಿದರೂ ಹೂಡಿಕೆದಾರರಿಗೆ ಹಣ ಸಿಗುವುದಿಲ್ಲ’ ಎಂದು ಹೇಳಿದರು.

ಮೊದಲ ಹೆಜ್ಜೆಯೇ ಸಿಐಡಿ: ‘ಎಫ್‌ಐಯು ಸ್ಟೇಷನ್ ಬಂದರೆ ಜನ ಸ್ಥಳೀಯ ಠಾಣೆಗೆ ಹೋಗುವ ಬದಲು ನೇರವಾಗಿ ‘ಎಫ್‌ಐಯು’ನ ಮೊರೆ ಹೋಗಬಹುದು. ಸಿಐಡಿ ಅಧಿಕಾರಿಗಳು ‘ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟ್ ಫೈನಾನ್ಶಿಯಲ್’ (ಕೆಪಿಐಡಿ) ಅಡಿ ಪ್ರಕರಣ ದಾಖಲಿಸಿಕೊಂಡು, ಆ ಕೂಡಲೇ ಕಂಪನಿಗಳ ಪೂರ್ವಾಪರ ಕಲೆ ಹಾಕುತ್ತಾರೆ. ಅದು ಕಾನೂನುಬಾಹಿರ ಕಂಪನಿ ಎಂದು ಗೊತ್ತಾಗುತ್ತಿದ್ದಂತೆಯೇ ಸರ್ಕಾರದ ಗಮನಕ್ಕೆ ತಂದು ತನಿಖೆ ಕೈಗೊಳ್ಳುತ್ತಾರೆ. ಇದರಿಂದ ಸಾಕ್ಷ್ಯನಾಶವೂ ಆಗುವುದಿಲ್ಲ, ಮಾಲೀಕರ ಆಸ್ತಿ ಮಾರಾಟಕ್ಕೂ ಅವಕಾಶ ಸಿಗುವುದಿಲ್ಲ’ ಎಂದರು.

‘ಹೂಡಿಕೆಗೂ ಮುನ್ನ ಖಾತರಿ ಕಡ್ಡಾಯ’

‘ಹೂಡಿಕೆದಾರರು ಯಾವುದೇ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಈ ರೀತಿಯ ಠೇವಣಿಗಳು ಅಧಿಕೃತವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಜತೆಗೆ ಸಂಸ್ಥೆಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ರಿಜಿಸ್ಟ್ರಾರ್ ಆಫ್ ಕಂಪನೀಸ್ ಮತ್ತು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿಯಿಂದ ಅನುಮತಿ ಪಡೆದುಕೊಂಡಿದೆಯೇ ಎಂಬುದನ್ನೂ ಖಾತರಿ ಮಾಡಿಕೊಳ್ಳಿ’ ಎಂದು ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ ಸಲಹೆ ನೀಡಿದ್ದಾರೆ.
ಯಾವ ಕಂಪನಿಯಿಂದ ಎಷ್ಟು ವಂಚನೆ?

ಕಂಪನಿ;ವಂಚಿಸಿದ್ದು (₹ ಕೋಟಿಗಳಲ್ಲಿ)

ಅಗ್ರಿಗೋಲ್ಡ್;1,640

‌ಆ್ಯಂಬಿಡೆಂಟ್;954

ವಿಕ್ರಂ ಇನ್ವೆಸ್ಟ್‌ಮೆಂಟ್;400

ಡ್ರೀಮ್ಸ್‌ ಜಿ.ಕೆ;375

ಷಣ್ಮುಗಂ ಫೈನಾನ್ಸ್;518

ಹಿಂದೂಸ್ಥಾನ್ ಇನ್‌ಫ್ರಾಕಾನ್;386

ಗೃಹ ಕಲ್ಯಾಣ್;277

ಟಿಜಿಎಸ್;260

ಹರ್ಷ ಎಂಟರ್‌ಟೈನ್‌ಮೆಂಟ್;136

ಸೆವೆನ್ ಹಿಲ್ಸ್;81

ಗ್ರೀನ್ ಬಡ್ಸ್ ಆರ್ಗೋ ಫಾರ್ಮ್;53.88

ವೃಕ್ಷ ಬಿಜಿನೆಸ್ ಸಲ್ಯೂಶನ್‌; 31

ಮೈತ್ರಿ ಪ್ಲಾಂಟೇಷನ್ ಆ್ಯಂಡ್ ಹಾರ್ಟಿಕಲ್ಚರ್; 9.82

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT