ಬೆಂಗಳೂರು: ‘ಹೀಗೊಂದು ದಿನ’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಭಾವನೆಯಾಗಿ ನಿರ್ಮಾಪಕ ಚಂದ್ರಶೇಖರ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ನಟಿ ಸಿಂಧೂ ಲೋಕನಾಥನ್, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.
ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸಿಂಧೂ, ನಿರ್ಮಾಪಕರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ ಬಳಿಕವೇ ವಿಚಾರಣೆ ಆರಂಭವಾಗಲಿದೆ.
‘ಹೀಗೊಂದು ದಿನ’ ಸಿನಿಮಾ ಮಾರ್ಚ್ನಲ್ಲೇ ಬಿಡುಗಡೆ ಆಗಿದೆ. ಆದರೆ, ಇದುವರೆಗೂ ನಿರ್ಮಾಪಕರು ಸಂಭಾವನೆ ನೀಡಿಲ್ಲ. ಅದನ್ನು ಕೇಳಿದ್ದಕ್ಕೆ ₹2 ಲಕ್ಷಕ್ಕೆ ಚೆಕ್ ಕೊಟ್ಟಿದ್ದರು. ಆ ಚೆಕ್ ಸಹ ಬೌನ್ಸ್ ಆಗಿದೆ’ ಎಂದು ನಟಿ ಸಿಂಧೂ ‘ಪ್ರಜಾವಾಣಿ’ಗೆ ತಿಳಿಸಿದರು.
‘ಚೆಕ್ ಬೌನ್ಸ್ ಬಳಿಕ ಹಲವು ಬಾರಿ ನಿರ್ಮಾಪಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಅವರು ಕರೆ ಸ್ವೀಕರಿಸಿರಲಿಲ್ಲ. ಅದರಿಂದ ನೊಂದು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ’ ಎಂದರು.
ಮೊಕದ್ದಮೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿರ್ಮಾಪಕ ಚಂದ್ರಶೇಖರ್ ಲಭ್ಯರಾಗಲಿಲ್ಲ.
ವಿಕ್ರಮ್ ಯೋಗಾನಂದ್ ಎಂಬುವರ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದ ಸಿನಿಮಾದಲ್ಲಿ ಸಿಂಧೂ ಜತೆಯಲ್ಲಿ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್ ಅಭಿನಯಿಸಿದ್ದರು.