ತಿರುವನಂತಪುರ: ಪೊಲೀಸ್ ವಾಹನದ ಚಾಲಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸುದೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸುದೇಶ್ ಅವರ ವಾಹನ ಚಾಲಕ ಗವಾಸ್ಕರ್ ಮೇಲೆ ಅವರ ಮಗಳು ಸ್ನಿಗ್ಧ ಶುಕ್ರವಾರ ಹಲ್ಲೆ ನಡೆಸಿದ್ದರು.
ಸಶಸ್ತ್ರ ಪೊಲೀಸ್ ಪಡೆ ಮುಖ್ಯಸ್ಥರಾಗಿದ್ದ ಸುದೇಶ್ ಅವರನ್ನು ಪೊಲೀಸ್ ಮುಖ್ಯ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಆದರೆ, ಅವರಿಗೆ ಯಾವುದೇ ಜವಾಬ್ದಾರಿ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಗವಾಸ್ಕರ್ ಕುಟುಂಬದ ಸದಸ್ಯರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ, ದೂರು ನೀಡಿದ್ದರು. ಪೊಲೀಸ್ ಅಧಿಕಾರಿ ಮಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಕೇರಳ ಪೊಲೀಸರ ಸಂಘ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದೆ.
‘ಘಟನೆ ಸಂಬಂಧ ಸ್ನಿಗ್ಧ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಗವಾಸ್ಕರ್ ತಮ್ಮ ಜತೆ ಅನುಚಿತವಾಗಿ ವರ್ತಿಸಿದ್ದಾಗಿ ಸ್ನಿಗ್ಧ ಪ್ರತಿದೂರು ದಾಖಲಿಸಿದ್ದಾರೆ’ ಎಂದು ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ತಿಳಿಸಿದ್ದಾರೆ.