ಚಿತ್ರದುರ್ಗ: ಏಳು ಸುತ್ತಿನ ಕೋಟೆಯ ಅಗುಳು ಗುಂಡಿಯ ಕುಸಿದ ಗೋಡೆಯನ್ನು ಕೇಂದ್ರ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯು ತಾತ್ಕಾಲಿಕವಾಗಿ ದುರಸ್ತಿ ಮಾಡಿದೆ.
ಪೂರ್ವ ಮುಂಗಾರು ಮಳೆಯಿಂದ ಮದ್ದು ಬೀಸುವ ಕಲ್ಲಿನ ಹಿಂಭಾಗದಲ್ಲಿ ಅಗಳು ಗೋಡೆ ಬಳಿ ಭೂಮಿ ಕುಸಿದು ಸುಮಾರು ಆರು ಅಡಿಯಷ್ಟು ಕಂದಕ ನಿರ್ಮಾಣವಾಗಿ, ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಎರಡು ವಾರ ಕಳೆದರೂ ದುರಸ್ತಿ ಮಾಡದಿರುವ ಬಗ್ಗೆ ಜೂನ್ 17ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ಮರದ ಕೊಂಬೆಗಳನ್ನು ಅಡ್ಡ ಇಟ್ಟು ಮರೆ ಮಾಡಿದ್ದ ಅಧಿಕಾರಿಗಳು, ಕಂದಕಕ್ಕೆ ಮಣ್ಣು ತುಂಬಿದ್ದಾರೆ. ಮತ್ತೆ ಮಳೆ ಸುರಿದರೆ ಈ ಮಣ್ಣು ಸಡಿಲಗೊಳ್ಳುವ ಸಾಧ್ಯತೆ ಇದೆ. ಆದರೆ, ಬಿರುಕು ಕಾಣಿಸಿಕೊಂಡ ಗೋಡೆಯನ್ನು ಮಾತ್ರ ದುರಸ್ತಿ ಮಾಡಿಲ್ಲ.
ಇತಿಹಾಸ ಸಂಶೋಧಕ ಡಾ.ಸಂತೋಷ ಹಾನಗಲ್ ಅವರು ಕೋಟೆಯ ಶಿಥಿಲಾವಸ್ಥೆಯಲ್ಲಿರುವ ಭಾಗಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.