ಚಿತ್ರದುರ್ಗ: ಕುಸಿಯುತ್ತಿರುವ ಅಗಳು ಗೋಡೆಯನ್ನು ಪುನರುಜ್ಜೀವನಗೊಳಿಸಿ ಏಳು ಸುತ್ತಿನ ಕೋಟೆ ಸಂರಕ್ಷಿಸುವಂತೆ ಒತ್ತಾಯಿಸಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಾರ್ವಜನಿಕರು ಬುಧವಾರ ಜಾಥಾ ನಡೆಸಿದರು.
‘ನಮ್ಮ ನಡಿಗೆ ಕೋಟೆ ಸಂರಕ್ಷಣೆ ಕಡೆಗೆ’ ಎಂಬ ಘೋಷಣೆಯೊಂದಿಗೆ ಕೋಟೆಯಲ್ಲಿ ಒಂದೂವರೆ ಗಂಟೆ ಹೆಜ್ಜೆ ಹಾಕಿದರು. ಶಿಥಿಲಗೊಂಡ ಕೋಟೆಯ ಭಾಗಗಳನ್ನು ವೀಕ್ಷಿಸಿ, ದುರಸ್ತಿ ಮಾಡುವಂತೆ ಆಗ್ರಹಿಸಿದರು.
ಐತಿಹಾಸಿಕ ಕೋಟೆಯಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ಹೊರಹಾಕಿದರು. ನೀರು ಪೂರೈಕೆ, ಅನೈರ್ಮಲ್ಯದ ಬಗ್ಗೆಯೂ ಧ್ವನಿಯತ್ತಿದರು. ಬುರುಜು, ಬತ್ತೇರಿಗಳನ್ನು ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.
‘ಐತಿಹಾಸಿಕ ಏಳು ಸುತ್ತಿನ ಕೋಟೆ ಶತಮಾನಗಳಿಂದ ಇರುವುದು ಚಿತ್ರದುರ್ಗದ ಹೆಗ್ಗಳಿಕೆ. ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಜೀರ್ಣೊದ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಈಚೆಗೆ ಸುರಿದ ಮಳೆಗೆ ಕೋಟೆಯ ಅಗಳು ಗೋಡೆ ಕುಸಿದಿರುವ ಕುರಿತು ‘ಪ್ರಜಾವಾಣಿ’ ಈಚೆಗೆ ವರದಿ ಪ್ರಕಟಿಸಿತ್ತು.