ಮಡಿಕೇರಿ: ಸುಂಟಿಕೊಪ್ಪ ಸಮೀಪದ ನಾಕೂರು ಬಳಿಯ ಹೋಮ್ ಸ್ಟೇಯೊಂದರಲ್ಲಿ ನಟ ರವಿಚಂದ್ರನ್ ಅಭಿನಯದ 'ರವಿ' ಚಿತ್ರದ ಮುಹೂರ್ತ ಬುಧವಾರ ನಡೆಯಿತು.
ನಟ ರವಿಚಂದ್ರನ್, ಶ್ರೀನಿವಾಸ್ ಪ್ರಭು, ಮೋನಿಷಾ, ಯತಿರಾಜ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಕೊಡಗಿನಲ್ಲೇ ನಡೆಯಲಿದೆ ಎಂದು ಚಿತ್ರ ತಂಡ ತಿಳಿಸಿತು.
ಸುದ್ದಿಗಾರರೊಂದಿಗೆ ರವಿಚಂದ್ರನ್ ಮಾತನಾಡಿ, ಚಿತ್ರೀಕರಣನಡೆಸಲು ಕೊಡಗು ಉತ್ತಮ ತಾಣ. ಯುವ ಪ್ರತಿಭೆಗಳೇ ಹೆಚ್ಚಿರುವ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಈ ಹಿಂದೆ ಕೊಡಗಿನಲ್ಲಿ ಸಾಕಷ್ಟು ಚಿತ್ರೀಕರಣ ಸಂದರ್ಭ ಭಾಗಿಯಾಗಿದ್ದೆ ಎಂದು ತಿಳಿಸಿದರು.
ನಿರ್ದೇಶಕ ಅಜಿತ್ ಸರ್ಕಾರ್ ಮಾತನಾಡಿ, ‘ನನ್ನ ಮೊದಲ ಸಿನಿಮಾ. ನಾನೇ ಬಂಡವಾಳ ಕೂಡ ಹೂಡಿದ್ದೇನೆ. ವಿಭಿನ್ನ ಕಥಾ ಹಂದರ ಹೊಂದಿದ್ದು ರೋಚಕ ಸನ್ನಿವೇಶಗಳು ಕಥೆಯಾಗಿದೆ. ಕಥೆಯ ಸುಳಿವನ್ನು ಊಹಿಸಲು ಅಸಾಧ್ಯ. ಖಂಡಿತ ಪ್ರೇಕ್ಷಕರನ್ನು ಸೆಳೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಛಾಯಾಗ್ರಾಹಕ ಪಿ.ಆರ್.ಕೆ. ದಾಸ್, ‘ಮಳೆಯಲ್ಲಿ ಚಿತ್ರೀಕರಣ ಮಾಡುವುದು ಸಾಹಸದ ಜತೆಗೆ ಕ್ರಿಯಾಶೀಲವಾದದ್ದು. ಕನ್ನಡ ಹಲವು ಸಿನಿಮಾದ ಕೆಲಸವನ್ನು ನಾನು ಮಳೆಯಲ್ಲಿ ಮಾಡಿದ್ದು; ಇದು ಹೊಸದಲ್ಲ. ಸಿನಿಮಾ ಕಥೆ ಸುಂದರವಾಗಿದ್ದು ಅಚ್ಚುಕಟ್ಟಾಗಿ ಮೂಡಿಬರಲಿದೆ’ ಎಂದರು.
ಚಿತ್ರದಲ್ಲಿ 5 ಹಾಡುಗಳಿದ್ದು, ಯೋಗರಾಜ್ ಭಟ್ ಸೇರಿದಂತೆ ಇನ್ನಿತರರು ಸಾಹಿತ್ಯ ಬರೆಯಲಿದ್ದಾರೆ. ಸಂಗೀತ ನಿರ್ದೇಶನ ಇನ್ನೂ ಅಂತಿಮಗೊಂಡಿಲ್ಲ. ‘ದೃಶ್ಯ’ ಚಿತ್ರದಂತೆ ಇದು ವಿಭಿನ್ನವಾಗಲಿದ್ದು ರವಿಚಂದ್ರನ್ ವೃತ್ತಿ ಬದುಕಿನ ಉತ್ತಮ ಚಿತ್ರವಾಗಿರಲಿದೆ ಎಂದರು.
ಮೊದಲ ಹಂತದಲ್ಲಿ 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕೋಟೆಬೆಟ್ಟ, ಮಡಿಕೇರಿ, ಸುಂಟಿಕೊಪ್ಪ ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗುವುದು ಎಂದು ಹೇಳಿದರು.